ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಸ್ಟಾರ್ ನಟ ರಣಬೀರ್ ಕಪೂರ್ ನಟನೆಯ ‘ರಾಮಾಯಣ’ ಚಿತ್ರದ ಟ್ರೈಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಜಾಗತಿಕ ಮಟ್ಟದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಟ್ರೈಲರ್ ವೀಕ್ಷಿಸಿದ ‘ಅನಿಮಲ್’ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಸಾಮಾಜಿಕ ಜಾಲತಾಣದಲ್ಲಿ ಚಿತ್ರತಂಡವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಇದು ಕೇವಲ ಟ್ರೈಲರ್ ಅಲ್ಲ ಎಂದ ವಂಗಾ:
ತಮ್ಮ ಅಧಿಕೃತ ‘X’ ಖಾತೆಯಲ್ಲಿ ರಾಮಾಯಣ ಚಿತ್ರದ ಟ್ರೈಲರ್ ಅನ್ನು ಹಂಚಿಕೊಂಡಿರುವ ಸಂದೀಪ್ ರೆಡ್ಡಿ ವಂಗಾ, ಇದು ʼರಾಮ ಯುಗದ ಆರಂಭʼ ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ʼಇದು ಕೇವಲ ಒಂದು ಟ್ರೈಲರ್ ಅಲ್ಲ, ಬದಲಿಗೆ ಅಧರ್ಮದ ಮೇಲೆ ಧರ್ಮವು ಯಾವಾಗಲೂ ಜಯಗಳಿಸುತ್ತದೆ ಎಂಬುದನ್ನು ಸಾರುವ ಶಾಶ್ವತ ನೆನಪೋಲೆʼ ಎಂದು ಭಾವುಕರಾಗಿ ಟ್ವೀಟ್ ಮಾಡಿದ್ದಾರೆ. ಇದರೊಂದಿಗೆ ರಣಬೀರ್ ಕಪೂರ್ ಧನುಸ್ಸು ಹಿಡಿದಿರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಳ್ಳುವ ಮೂಲಕ ನಟನ ಹೊಸ ಅವತಾರಕ್ಕೆ ಸಾಥ್ ನೀಡಿದ್ದಾರೆ.
ಇದನ್ನೂ ಓದಿ:
ದೀಪಾವಳಿಗೆ ಬರಲಿದ್ದಾನೆ ಶ್ರೀರಾಮ:
ನಿತೇಶ್ ತಿವಾರಿ ನಿರ್ದೇಶನದ ಈ ಮಹಾಕಾವ್ಯದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ ಕಾಣಿಸಿಕೊಂಡರೆ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಕನ್ನಡದ ಸೂಪರ್ಸ್ಟಾರ್ ರಾಕಿಂಗ್ ಸ್ಟಾರ್ ಯಶ್ ರಾವಣನ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಹ್ಯಾನ್ಸ್ ಜಿಮ್ಮರ್ ಹಾಗೂ ಎ.ಆರ್. ರೆಹಮಾನ್ ಅದ್ಭುತ ಸಂಗೀತ ನಿರ್ದೇಶನವಿರುವ ‘ರಾಮಾಯಣ: ಭಾಗ 1’ ಚಿತ್ರವು 2026ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲು ಸಜ್ಜಾಗಿದೆ.



