ಹೊಸ ದಿಗಂತ ವರದಿ, ಮಡಿಕೇರಿ:
ಮಹಿಳೆಯೊಬ್ಬರನ್ನು ಕಾರಿನಲ್ಲಿ ಕರೆದೊಯ್ದು ಅತ್ಯಾಚರ ಎಸಗಿ ಪರಾರಿಯಾಗಿದ್ದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ಪೊನ್ನಂಪೇಟೆಯ ಆಟೋಚಾಲಕ, ಕಾಟೆಕೊಲ್ಲಿ ನಿವಾಸಿ ಮಣಿಕಂಠ ಎಂದು ಗುರುತಿಸಲಾಗಿದೆ.
ಪೊನ್ನಂಪೇಟೆಯ ಬಾರ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯೊಬ್ಬರು ಮಾ.12ರ ಸಂಜೆ ಕೆಲಸ ಮುಗಿಸಿ ಮನೆಗೆ ತೆರಳಲು ವಾಹನಕ್ಕಾಗಿ ಕಾಯುತ್ತಿದ್ದ ಸಂದರ್ಭ ಅಪರಿಚಿತ ವ್ಯಕ್ತಿಯು ಮಾರುತಿ ಓಮ್ನಿ ಕಾರ್ನಲ್ಲಿ ಬಂದು ನಾನು ಕುಂದ ಕಡೆ ಹೋಗುತ್ತೇನೆ ನೀವು ಬರುತ್ತೀರಾ ಎಂದು ಕೇಳಿದನೆನ್ನಲಾಗಿದೆ.
ಅದರಂತೆ ತಾನು ಬಿ.ಶೆಟ್ಟಿಗೇರಿ ಕಡೆ ಬರುವುದಾಗಿ ತಿಳಿಸಿದ ಮಹಿಳೆ ಕಾರಿನಲ್ಲಿ ಕುಳಿತು ಸ್ವಲ್ಪ ದೂರ ತೆರಳಿದ ನಂತರ ಕಾರ್ ನಿಲ್ಲಿಸಿದ ಚಾಲಕ ಬಲವಂತವಾಗಿ ಅತ್ಯಾಚಾರ ಮಾಡಿ ಯಾರಿಗಾದರೂ ತಿಳಿಸಿದಲ್ಲಿ ಕೊಲೆ ಮಾಡುವುದಾಗಿ ಬೆದರಿಸಿದ್ದಲ್ಲದೆ, ಆತನ ಮೊಬೈಲ್ ನಂಬರ್’ನಿಂದ ಮಹಿಳೆಯ ಮೊಬೈಲ್’ಗೆ ಡಯಲ್ ಮಾಡಿ ಆಕೆಯನ್ನು ರಸ್ತೆಯಲ್ಲೇ ಬಿಟ್ಟು ಪರಾರಿಯಾಗಿದ್ದಾಗಿ ಹೇಳಲಾಗಿದೆ.
ಈ ಕುರಿತು ಮಾ.16ರಂದು ಮಹಿಳೆ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ನೊಂದ ಮಹಿಳೆ ನೀಡಿದ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿದಾಗ, ಆರೋಪಿಯು ಪೊನ್ನಂಪೇಟೆಯಲ್ಲಿ ಆಟೋ ಚಾಲಕನಾಗಿರುವ ಕಾಟೆಕೊಲ್ಲಿ ನಿವಾಸಿ ಮಣಿಕಂಠ ಎಂಬುದು ಪತ್ತೆಯಾಗಿದೆ.
ವೀರಾಜಪೇಟೆ ಉಪ ವಿಭಾಗದ ಡಿವೈಎಸ್ ಪಿ ಆರ್.ಮೋಹನ್ ಕುಮಾರ್, ಗೋಣಿಕೊಪ್ಪ ವೃತ್ತ ನಿರೀಕ್ಷಕ ಕೆ.ಎಂ. ವಸಂತ, ಪಿಎಸ್ಐ ಟಿ.ಸಿದ್ದರಾಜು ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಆರೋಪಿಯ ಮಾಹಿತಿ ಸಂಗ್ರಹಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.