ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾರ್ಧಾಮ್ ಯಾತ್ರಿಕರಿಗೆ ಇನ್ಮುಂದೆ ನೆಟ್ವರ್ಕ್ ಸಮಸ್ಯೆ ಇರೋದಿಲ್ಲ. ದೇಶದೆಲ್ಲೆಡೆಯಿಂದ ಚಾರ್ಧಾಮ್ಗೆ ಆಗಮಿಸುವ ಲಕ್ಷಾಂತರ ಭಕ್ತರು 5ಜಿಯ ಅಲ್ಟ್ರಾ ಹೈಸ್ಪೀಡ್ನ ಪ್ರಯೋಜನವನ್ನು ಪಡೆಯುವ ನಿರೀಕ್ಷೆಯಿದೆ. ಯಾಕೆಂದರೆ, ರಿಲಯನ್ಸ್ ಜಿಯೋ ತನ್ನ ಟ್ರೂ 5ಜಿ ಸೇವೆಯನ್ನು ದೇವಭೂಮಿ ಉತ್ತರಾಖಂಡದ ಚಾರ್ಧಾಮ್-ಬದರೀನಾಥ್, ಕೇದಾರನಾಥ್, ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳ ಆವರಣದಲ್ಲಿ ಪ್ರಾರಂಭಿಸಿದೆ.
ಬದರೀನಾಥ್ ಕೇದಾರನಾಥ್ ದೇವಾಲಯ ಸಮಿತಿ (ಬಿಕೆಟಿಸಿ) ಅಧ್ಯಕ್ಷ ಅಜೇಂದ್ರ ಅಜಯ್, ರಿಲಯನ್ಸ್ ಜಿಯೋ 5ಜಿ ಸೇವೆಯನ್ನು ಉದ್ಘಾಟಿಸಿದರು. ಚಾರ್ಧಾಮ್ ಯಾತ್ರೆಯ ಆರಂಭದಲ್ಲಿಯೇ 5ಜಿ ಸೇವೆಗಳನ್ನು ಪ್ರಾರಂಭಿಸಿದ್ದಕ್ಕಾಗಿ ಮತ್ತು ರಾಜ್ಯದ ಡಿಜಿಟಲ್ ಸ್ವರೂಪದಲ್ಲಿ ಬದಲಾವಣೆಯನ್ನು ತಂದಿದ್ದಕ್ಕಾಗಿ ವಿಡಿಯೋ ಸಂದೇಶದಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಜಿಯೋವನ್ನು ಅಭಿನಂದಿಸಿದರು. ಜೊತೆಗೆ ಚಾರ್ಧಾಮ್ ಯಾತ್ರೆಯ ಸಮಯದಲ್ಲಿ, ನೈಜ-ಸಮಯದ ಆಧಾರದ ಮೇಲೆ ವಿಪತ್ತು ನಿರ್ವಹಣೆ, ಕಣ್ಗಾವಲು ಮತ್ತು ಯಾತ್ರೆಯ ಮೇಲ್ವಿಚಾರಣೆಯನ್ನು ಮಾಡಬಹುದು ಎಂದು ಪುಷ್ಕರ್ ಸಿಂಗ್ ಧಾಮಿ ವಿವರಿಸಿದರು.
ರಿಲಯನ್ಸ್ ಜಿಯೋದ ಉಪಸ್ಥಿತಿ ರಾಜಧಾನಿ ಡೆಹ್ರಾಡೂನ್ನಿಂದ ಇಂಡೋ-ಟಿಬೆಟ್ ಗಡಿಯಲ್ಲಿರುವ ಉತ್ತರಾಖಂಡದ ಕೊನೆಯ ಭಾರತೀಯ ಹಳ್ಳಿಯವರೆಗೆ ಗೋಚರಿಸುತ್ತದೆ. ಎಲ್ಲಾ ಚಾರ್ಧಾಮ್ಗಳಲ್ಲಿ, ಕೇದಾರನಾಥ ಧಾಮಕ್ಕೆ ಚಾರಣ ಮಾರ್ಗದಲ್ಲಿ ಮತ್ತು 13,650 ಮೀಟರ್ ಎತ್ತರದಲ್ಲಿರುವ ಶ್ರೀ ಹೇಮಕುಂಡ್ ಸಾಹಿಬ್ ಗುರುದ್ವಾರದಲ್ಲಿ ನೆಟ್ವರ್ಕ್ ಲಭ್ಯವಿರುವ ರಾಜ್ಯದ ಏಕೈಕ ಆಪರೇಟರ್ ಜಿಯೋ ಎನಿಸಿಕೊಂಡಿದೆ.
5ಜಿ ಸೇವೆ ಪ್ರಾರಂಭದ ಕುರಿತು ಮಾತನಾಡಿದ ಜಿಯೋ ವಕ್ತಾರರು, ‘ಚಾರ್ಧಾಮ್ ದೇವಾಲಯ ಆವರಣದಲ್ಲಿ ಜಿಯೋ ಟ್ರೂ 5ಜಿ ಸೇವೆಗಳನ್ನು ಪ್ರಾರಂಭಿಸಲು ನಾವು ಉತ್ಸುಕರಾಗಿದ್ದೇವೆ. ಜಿಯೋ ಟ್ರೂ 5ಜಿ ಉತ್ತರಾಖಂಡಕ್ಕೆ ಗೇಮ್ ಚೇಂಜರ್ ಎಂದು ಸಾಬೀತುಪಡಿಸಲಿದೆ. ಇದು ವಿದ್ಯಾರ್ಥಿಗಳು, ನಾಗರಿಕರು ಮತ್ತು ಸಂದರ್ಶಕರಿಗೆ ಹೊಸ ಅವಕಾಶಗಳನ್ನು ಒದಗಿಸುತ್ತದೆ. 2023ರ ಡಿಸೆಂಬರ್ ವೇಳೆಗೆ, ಜಿಯೋ ತನ್ನ 5ಜಿ ನೆಟ್ವರ್ಕ್ಅನ್ನು ಉತ್ತರಾಖಂಡದ ಪ್ರತಿ ನಗರ, ತೆಹಸಿಲ್ ಮತ್ತು ತಾಲೂಕಿಗೆ ವಿಸ್ತರಿಸಲಿದೆ ಎಂದರು.