ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯಪುರದ ಇಂಡಿ ತಾಲ್ಲೂಕಿನಲ್ಲಿ ಕೊಳವೆಬಾವಿಗೆ ಬಿದ್ದು ಪವಾಡ ರೀತಿಯಲ್ಲಿ ಬದುಕಿ ಬಂದ ಮಗನ ಹೆಸರನ್ನು ಬದಲಾಯಿಸೋಕೆ ಪೋಷಕರು ನಿರ್ಧರಿಸಿದ್ದಾರೆ.
ಕೊಳವೆ ಬಾವಿಯಲ್ಲಿ ನನ್ನ ಕಂದ ಸಿಲುಕಿದ್ದಾನೆ ಆತನನ್ನು ಬದುಕಿಸಿಕೊಡು ಎಂದು ಸಾತ್ವಿಕ್ ತಾಯಿ ಪೂಜಾ ಹರಕೆ ಹೊತ್ತಿದ್ದರು.
ಲಚ್ಯಾನ್ ಸಿದ್ದಲಿಂಗ ಮಹಾರಾಜರ ಮಠದ ವರೆಗೆ ದೀಡ ನಮಸ್ಕಾರ ಹಾಕಿ ಮಠದಲ್ಲಿ ತೊಟ್ಟಿಲು ಕಟ್ಟಿ ʼಸಿದ್ದಲಿಂಗʼ ಮರುನಾಮಕರಣ ಮಾಡುತ್ತೇವೆ ಎಂದು ಹೇಳಿಕೊಂಡಿದ್ದರು. ಅಂತೆಯೇ ಇದೇ ತಿಂಗಳಿನಲ್ಲಿ ಸಾತ್ವಿಕ್ ಆರೋಗ್ಯ ಸುಧಾರಿಸಿದ ನಂತರ ಹರಕೆ ತೀರಿಸುವುದಾಗಿ ಪೂಜಾ ಹೇಳಿದ್ದಾರೆ.
ಸಿದ್ದಲಿಂಗ ಮಹಾರಾಜರ ಪವಾಡದಿಂದ ನನ್ನ ಮಗ ಬದುಕಿ ಬಂದಿದ್ದಾನೆ. ಹೀಗಾಗಿ ಸಾತ್ವಿಕ್ ಹೆಸರು ಬದಲಿಗೆ ಸಿದ್ದಲಿಂಗ ಎಂಬ ಹೆಸರನ್ನು ನಾಮಕರಣ ಮಾಡುತ್ತೇವೆ. ರಕ್ಷಣೆ ಮಾಡಿದ ಎಲ್ಲ ಸಿಬ್ಬಂದಿಗೆ ಜಿಲ್ಲಾಡಳಿತಕ್ಕೆ ಧನ್ಯವಾದ ಹೇಳುತ್ತೇನೆ, ಅವರ ಶ್ರಮ ಹಾಗೂ ದೇವರ ಆಶೀರ್ವಾದಿಂದ ನನ್ನ ಮಗ ಬದುಕಿ ಬಂದ, ಅವನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೂ ಧನ್ಯವಾದಗಳನ್ನು ಹೇಳುತ್ತೇನೆ ಎಂದು ಪೂಜಾ ಹೇಳಿದ್ದಾರೆ.