ಹೊಸದಿಗಂತ ವರದಿ, ಕಲಬುರಗಿ:
ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವ ನಮ್ಮ ಸರ್ಕಾರ ರಾಜ್ಯದಲ್ಲಿ 5000 ಶಾಲೆಗಳನ್ನು ದುರಸ್ತಿ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದು, ಯುದ್ದೋಪಾದಿಯಲ್ಲಿ ಈ ಕಾರ್ಯ ಸಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಮುರುಗೇಶ ನಿರಾಣಿ ಹೇಳಿದರು.
ಬುಧವಾರ ಅಫಜಲಪೂರ ತಾಲೂಕಿನ ಮಾತೋಳಿ ಗ್ರಾಮದಲ್ಲಿ ಮಳೆಯಿಂದ ಮನೆ ಕುಸಿದ್ದರಿಂದ ಹಾನಿಯಾದ ಮನೆ ವೀಕ್ಷಿಸಿ, ಮನೆಯ ಮಾಲೀಕ ಗ್ರಾಮದ ಪಂಡಿತ್ ತಂ. ಶಿವಯೋಗಿ ಅವರಿಗೆ ಶಾಸಕ ಎಂ.ವೈ.ಪಾಟೀಲ ಅವರೊಂದಿಗೆ 10 ಸಾವಿರ ರೂ. ಪರಿಹಾರದ ಚೆಕ್ ವಿತರಿಸಿ ಅವರು ಮಾತನಾಡಿದರು.
ಶಾಲೆ ಕಟ್ಟಡ ಸುಸ್ಥಿತಿ ಕುರಿತು ಲೋಕೋಪಯೋಗಿ ಇಲಾಖೆಯಿಂದ ಒಂದು ವಾರದೊಳಗೆ ಫಿಟ್ನೆಸ್ ಸರ್ಟಿಫಿಕೇಟ್ ಪಡೆಯಲು ಬಿ.ಇ.ಓ ಗಳಿಗೆ ಸೂಚಿಸಿಲಾಗಿದೆ. ಉತ್ತಮ ಸ್ಥಿತಿಯಲ್ಲಿರುವ ಶಾಲೆಗಳಿಗೆ ಮಳೆ ಬಂದರೆ ರಜೆ ನೀಡುವುದಿಲ್ಲ. ಕಟ್ಟಡ ಶಿಥಿಲಾವಸ್ಥೆಯಲ್ಲಿ ಇದ್ದಲ್ಲಿ ರಜೆಗೆ ಪರಿಗಣಿಸಲಾಗುವುದು ಎಂದರು.
ಮಹಾರಾಷ್ಟ್ರದ ಉಜನಿ ಜಲಾಶಯದ ಅಧಿಕಾರಿಗಳು ಮತ್ತು ಅಲ್ಲಿನ ಜಿಲ್ಲಾಧಿಕಾರಿಗಳೊಂದಿಗೆ ನಮ್ಮ ಅಧಿಕಾರಿಗಳು ಸತತ ಸಂಪರ್ಕ ಸಾಧಿಸಲು ವಾಟ್ಸ್ಯಾಪ್ ಗ್ರೂಪ್ ರಚಿಸಲಾಗಿದೆ. ಪ್ರತಿ ಗಂಟೆಗೆ ಆ ರಾಜ್ಯದಲ್ಲಿನ ಡ್ಯಾಂನಿಂದ ನೀರು ಹರಿಬಿಡುವ ಮಾಹಿತಿ ನಮಗೆ ಸಿಗಲಿದೆ ಎಂದರು.
ಅತಿವೃಷ್ಟಿಯಿಂದ ಮಾನವ, ಪ್ರಾಣಿ ಹಾನಿಯಾದಲ್ಲಿ ಎಸ್.ಡಿ.ಆರ್.ಎಫ್/ ಎನ್.ಡಿ.ಅರ್.ಎಫ್ ಮಾರ್ಗಸೂಚಿ ಜೊತೆಗೆ ರಾಜ್ಯ ಸರ್ಕಾರ ಹೆಚ್ಚಿನ ಪರಿಹಾರ ನೀಡಲಾಗುತ್ತಿದೆ. ಮನೆ ಕುಸಿದ ಪ್ರಕರಣಗಳಲ್ಲಿ ಶೇ.75ರಷ್ಟು ಮೇಲ್ಪಟ್ಟ ಹಾನಿಗೆ 5 ಲಕ್ಷ ರೂ., ಶೇ.25 ರಿಂದ 50ರಷ್ಟು ಹಾನಿಗೆ 3 ಲಕ್ಷ ರೂ. ಹಾಗೂ ಶೇ.15 ರಿಂದ ಶೇ.25 ರಷ್ಟು ಹಾನಿಗೆ 50 ಸಾವಿರ ರೂ. ಪರಿಹಾರ ನೀಡಲಾಗುತ್ತಿದೆ. ಇದಕ್ಕೆ ಅನುದಾನ ಸಹ ಜಿಲ್ಲೆಗೆ ಬಿಡುಗಡೆ ಮಾಡಲಾಗಿದೆ ಎಂದರು.