ಹೊಸದಿಗಂತ ವರದಿ ಕೊಪ್ಪಳ:
ಅನಾಹುತ ಸಂಭವಿಸಿದರೆ ತಕ್ಷಣವೇ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ, ಶಾಶ್ವತ ಪರಿಹಾರ ನೀಡುತ್ತೇವೆ ಎನ್ನುತ್ತಾರೆ. ಈ ಸಾಲಿಗೆ ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕರೂ ಕೂಡಾ ಹೊರತಾಗಿಲ್ಲ. ಎರಡ್ಮೂರು ವಾರದ ಹಿಂದೆ ನಗರದ ಅಶೋಕ ವೃತ್ತದಲ್ಲಿ ಲಾರಿಯೊಂದು ಅಶೋಕ ವೃತ್ತಕ್ಕೆ ಡಿಕ್ಕಿ ಹೊಡೆದಿದ್ದು, ಅ.14ರಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಪರಿಶೀಲನೆ ನಡೆಸಿ ಶೀಘ್ರವೇ ಅಶೋಕ ವೃತ್ತದ ಸುತ್ತಲೂ ತಡೆಗೋಡೆ ನಿರ್ಮಿಸುವುದಾಗಿ ಭರವಸೆ ನೀಡಿದ್ದರು.
ಈ ಸಂಬಂಧ ಅ.19ರಂದು ಸಭೆ ಕರೆಯುವುದಾಗಿ ತಿಳಿಸಿದ್ದರು. ಈವರೆಗೂ ಯಾವುದೇ ಸಭೆ ನಡೆಸದೆ ಕೇವಲ ಆಶ್ವಾಸನೆಗಳನ್ನು ನೀಡಲು ಮಾತ್ರ ಸೀಮಿತ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.
ಕೊಪ್ಪಳ ಕೋಟೆಯ ರಣಭೂಮಿಯಲ್ಲಿ ಶತೃ ಸೈನ್ಯದ ವಿರುದ್ಧ ಹೋರಾಟ ನಡೆಸಿ ಹುತಾತ್ಮರಾದ 100ನೇ ವರ್ಷಕ್ಕೆ ಅಂದರೆ 15 ನೇ ಆಗಸ್ಟ್ 1957 ರಂದು ಅಶೋಕ ಸ್ತಂಭ ಸ್ಥಾಪಿಸಲಾಗಿದೆ. ವೃತ್ತದಲ್ಲಿ ಅಶೋಕ ಸ್ತಂಭ ಮೊದಲಿಗೆ ಎತ್ತರದಲ್ಲಿತ್ತು. ಅಭಿವೃದ್ಧಿಯ ನೆಪದಲ್ಲಿ ರಸ್ತೆ ಅಗೆಯಲು ಆರಂಭವಾದ ಮೇಲೆ ಸ್ತಂಭ ಕುಸಿಯುತ್ತಾ ಹೋಗುತ್ತಿದೆ. ಅಶೋಕ ವೃತ್ತಕ್ಕೆ 65 ವರ್ಷವಾಗಿದ್ದು, ಅಶೋಕ ಸ್ತಂಭ ರಕ್ಷಿಸಲು ಸುತ್ತಲೂ ತಡೆಗೋಡೆ ನಿರ್ಮಾಣ ಮಾಡಬೇಕು. ರಸ್ತೆಗಿಂತ ಮೇಲ್ಮಟ್ಟಕ್ಕೆ ಇದನ್ನು ನಿರ್ಮಿಸಿ ಐತಿಹಾಸಿಕ ಹಿನ್ನೆಲೆ ಹೊಂದಿರುವ ಅಶೋಕ ವೃತ್ತ ರಕ್ಷಿಸಬೇಕು ಎಂಬ ಕೂಗು ನಗರದೆಲ್ಲೆಡೆ ಕೇಳಿಬರುತ್ತಿದೆ. ಆದರೆ ಈ ಕೂಗಿದೆ ಜನಪ್ರತಿನಿಧಿಗಳು ಕ್ಯಾರೇ ಎನ್ನುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.