ಹೊಸದಿಗಂತ ಡಿಜಿಟಲ್ ಡೆಸ್ಕ್
ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ನ 69 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 5 ವಿಕೆಟ್ ಗಳ ಸೋಲು ಅನುಭವಿಸಿದ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ ಆಫ್ ರೇಸ್ ನಿಂದ ಹೊರಬಿಬಿತ್ತು. ಡೆಲ್ಲಿ ಸೋಲಿನಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ನಲ್ಲಿ ಸ್ಥಾನ ಸಂಪಾದಿಸಿಕೊಂಡಿತು. ಡೆಲ್ಲಿ ನಾಯಕ ರಿಷಬ್ ಪಂತ್ ಡೆವಾಲ್ಡ್ ಬ್ರೇವಿಸ್ರ ಸುಲಭದ ಕ್ಯಾಚ್ ಕೈಚೆಲ್ಲಿದ್ದು, ರಿವ್ಯೂ ತೆಗೆದುಕೊಳ್ಳುವಲ್ಲಿ ಮಾಡಿಕೊಂಡ ಯಡವಟ್ಟುಗಳು ಡೆಲ್ಲಿ ಸೋಲಿಗೆ ಕಾರಣವಾದವು.
ಮುಂಬೈ ಗೆಲುವಿಗೆ 34 ಎಸೆತಗಳಲ್ಲಿ 65 ರನ್ ಗಳ ಅಗತ್ಯವಿದ್ದಾಗ ಉತ್ತಮವಾಗಿ ಆಡುತ್ತಿದ್ದ ಡೆವಾಲ್ಡ್ ಬ್ರೇವಿಸ್ ಶಾರ್ದೂಲ್ ಠಾಕೂರ್ ಎಸೆತದಲ್ಲಿ ಬೋಲ್ಡ್ ಆಗಿ ನಿರ್ಗಮಿಸಿದ್ದರು. ಈ ಹಂತದಲ್ಲಿ ಡೆಲ್ಲಿ ಗೆಲುವಿಗೆ ಉತ್ತಮ ಅವಕಾಶವಿತ್ತು. ಬಳಿಕ ಕ್ರೀಸ್ ಗೆ ಬಳದ ಟೀಮ್ ಡೇವಿಡ್ ಮೊದಲ ಎಸೆತದಲ್ಲೇ ಪಂತ್ ಗೆ ಕ್ಯಾಚ್ ನೀಡಿದ್ದರು. ಅಂಪೈರ್ ಔಟ್ ನೀಡಿರಲಿಲ್ಲ. ಬಾಲು ಬ್ಯಾಟ್ ಸವರಿ ಬಂದಿರುವ ಅನುಮಾನವಿದ್ದರೂ ಪಂತ್ ಡಿಆರ್ಎಸ್ ತೆಗೆದುಕೊಳ್ಳಲಿಲ್ಲ. ನಂತರ ವಿಡಿಯೋ ರಿಪ್ಲೇ ನಲ್ಲಿ ಬ್ಯಾಟ್ ಗೆ ಎಡ್ಜ್ ಆಗಿರುವುದು ಸ್ಪಷ್ಟವಾಗಿ ತೋರುತ್ತಿತ್ತು. ಪಂತ್ ನಿರ್ಧಾರ ಪಂದ್ಯದ ಗತಿಯನ್ನೇ ಬದಲಿಸಿತು. ಬಳಿಕ ಬಿರುಗಾಳಿಯಾಗಿ ಅಬ್ಬರಿಸಿದ ಡೇವಿಡ್ ಕೇವಲ 11 ಎಸೆತಗಳಲ್ಲಿಯೇ 34 ರನ್ ಸಿಡಿಸಿ ಡೆಲ್ಲಿ ಕೈಯ್ಯಿಂದ ಜಯವನ್ನು ಕಸಿದುಕೊಂಡರು.
ಪಂದ್ಯ ಮುಗಿದ ಬಳಿಕ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ ಪಂತ್ ತಾವು ಡಿಆರ್ ಎಸ್ ಏಕೆ ತೆಗೆದುಕೊಳ್ಳಲಿಲ್ಲ ಎಂಬ ವಿಚಾರವನ್ನು ಬಹಿರಂಗಪಡಿಸಿದರು. ಅದು ಕ್ಯಾಚ್ ಆಗಿರುವುದರ ಬಗ್ಗೆ ನನಗೆ ಅನುಮಾನವಿತ್ತು. ಆ ಬಗ್ಗೆ ವೃತ್ತದ ಒಳಗೆ ನಿಂತಿದ್ದ ಫೀಲ್ಡರ್ ಗಳನ್ನು ಕೇಳಿದೆ. ಆದರೆ ಅವರು ಸಹ ಅದು ಕ್ಯಾಚ್ ಆಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಹಾಗಾಗಿ ನಾನು ಆನ್-ಫೀಲ್ಡ್ ಅಂಪೈರ್ ನಿರ್ಧಾರವನ್ನು ಪ್ರಶ್ನಿಸಲಿಲ್ಲ ಎಂದು ಪಂತ್ ಹೇಳಿದರು.
ಪಂತ್ ಹೇಳಿಕೆ ಈಗ ನೆಟ್ಟಿಗರಿಂದ ಭಾರೀ ಟ್ರೋಲ್ ಗೆ ಒಳಗಾಗುತ್ತಿದೆ. ಬ್ಯಾಟ್ಸ್ ಮನ್ ವಿಕೆಟ್ ಹಿಂದೆ ಕ್ಯಾಚ್ ನೀಡಿದರೆ ಕೀಪರ್ ಹಾಗೂ ಬೌಲರ್ ಗೆ ಮೊದಲು ತಿಳಿಯುತ್ತದೆ. ಅನುಮಾನವಿದ್ದ ಮೇಲೆ ರಿವ್ಯೂ ಪಡೆದುಕೊಳ್ಳಬೇಕಿತ್ತು. ಅಲ್ಲದೆ ಕಡೇ ಹಂತದತ್ತ ಸಾಗುತ್ತಿದ್ದ ಪಂದ್ಯದಲ್ಲಿ 2 ರಿವ್ಯೂ ಇರಿಸಿಕೊಂದ್ದರೂ, ಚೆಂಡು ಬ್ಯಾಟ್ ಗೆ ಸವರಿದ ಸದ್ದು ಕೇಳಿದ್ದರೂ ಪಂತ್ ರಿವ್ಯೂ ತೆಗೆದುಕೊಳ್ಳಲು ನಿರಾಕರಿಸಿದ್ದು ಪಂತ್ ಕ್ಯಾಪ್ಟನ್ಸಿಯ ವಿಫಲತೆ. ಈಗ ಫೀಲ್ಡರ್ ಗಳನ್ನು ಧೂಷಿಸಿ ಏನು ಪ್ರಯೋಜನ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ