ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ಪ್ರಕರಣ ಮಾಸುವ ಮುನ್ನವೇ ನವೀ ಮುಂಬೈನಲ್ಲಿ ಮತ್ತೊಂದು ಕೊಲೆ ಪ್ರಕರಣ ನಡೆದಿದೆ. ತನ್ನೊಂದಿಗೆ ಲಿವ್-ಇನ್ ರಿಲೇಶನ್ ಶಿಪ್ ನಲ್ಲಿದ್ದ ಉರ್ವಿ ವೈಷ್ಣವ್ ಎಂಬಾಕೆಯನ್ನು ಕೊಲೆ ಮಾಡಿ ನದಿಗೆಸೆಯುವ ಮೂಲಕ ವಂಚಕ ರಿಯಾಜ್ ಖಾನ್ ವಿಕೃತಿ ಮೆರೆದಿದ್ದಾನೆ. ಡಿಸೆಂಬರ್ 17 ರಂದು ಗಾಡಿ ನದಿಯ ಬಳಿ 27 ವರ್ಷದ ಮಹಿಳೆಯ ಶವ ಪತ್ತೆಯಾಗಿತ್ತು. ಮೃತ ಮಹಿಳೆಯನ್ನು ಉರ್ವಿ ವೈಷ್ಣವ್ ಎಂದು ಗುರುತಿಸಲಾಗಿದ್ದು ಆಕೆ ಡಿಸೆಂಬರ್ 13 ರಂದು ಕೋಪರ್ ಖೈರಾನೆ ಪ್ರದೇಶದಲ್ಲಿನ ತನ್ನ ನಿವಾಸದಿಂದ ನಾಪತ್ತೆಯಾಗಿದ್ದಳು. ಈ ಕುರಿತು ಪೋಲೀಸರು ತನಿಖೆ ನಡೆಸಿದಾಗ ಅವಳ ವಿಕೃತ ಪ್ರೇಮಿಯ ದುಷ್ಕೃತ್ಯ ಬೆಳಕಿಗೆ ಬಂದಿದೆ.
ಲಭ್ಯವಿರುವ ಮಾಹಿತಿಯ ಪ್ರಕಾರ 27 ವರ್ಷದ ರಾಜಸ್ಥಾನ ಮೂಲದ ಉರ್ವಿ ವೈಷ್ಣವ್ ಎಂಬಾಕೆ ನವೀ ಮುಂಬೈನಲ್ಲಿ ಕಳೆದ 6-7 ವರ್ಷಗಳಿಂದ ಹೊಟೆಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದಳು. ಈ ವೇಳೆ ಆಕೆಗೆ ರಿಯಾಜ್ ಎಂಬಾತನೊಂದಿಗೆ ಪ್ರೇಮಾಂಕುರವಾಗಿ ಆತನೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದಳು. ಆದರೆ ರಿಯಾಜ್ ಗೆ ಅದಾಗಲೇ ಮದುವೆಯಾಗಿತ್ತು ಎಂಬ ವಿಷಯ ತಿಳಿಯುತ್ತಿದ್ದಂತೆ ತನ್ನನ್ನು ಮದುವೆಯಾಗುವಂತೆ ಉರ್ವಿ ಕೇಳಿಕೊಂಡಿದ್ದಾಳೆ. ಅವಳನ್ನು ಕೊಲೆ ಮಾಡಲು ಇದೇ ಕಾರಣವಾಯಿತು. ಆಕೆ ಮದುವೆಯಾಗು ಎಂದು ಒತ್ತಾಯಿಸಿದ್ದಕ್ಕೆ ರಿಯಾಜ್ ಖಾನ್ ಅವಳನ್ನು ಕೊಲೆ ಮಾಡಿ ನದಿಗೆಸೆದಿದ್ದ ಎಂದು ಪೋಲೀಸರು ಹೇಳಿದ್ದಾರೆ. ವರದಿಗಳ ಪ್ರಕಾರ ರಿಯಾಜ್ ಖಾನ್ ಗೆ ಅದಾಗಲೇ 3 ಜನ ಪತ್ನಿಯರಿದ್ದರು ಎನ್ನಲಾಗಿದೆ.
ಕೊಲೆ ಮಾಡಿದ ನಂತರ ಕೃತ್ಯವನ್ನು ಮರೆ ಮಾಚಲು ಆತನಿಗೆ ಸಹಾಯ ಮಾಡಿರುವುದಾಗಿ ಪ್ರಕರಣದಲ್ಲಿ ಬಂಧಿತನಾಗಿರುವ ಇನ್ನೊಬ್ಬ ಆರೋಪಿ ಇಮ್ರಾನ್ ಶೇಖ್ ಒಪ್ಪಿಕೊಂಡಿದ್ದಾನೆ ಎಂದು ಪೋಲೀಸರು ಹೇಳಿದ್ದಾರೆ. ಕೊಲೆಯಾದ ಉರ್ವಿ ಕೋಪರ್ ಖೈರಾನೆ ಪ್ರದೇಶದಲ್ಲಿ ತನ್ನ ಇಬ್ಬರು ಸೋದರರೊಂದಿಗೆ ವಾಸಿಸುತ್ತಿದ್ದಳು. ದಿನಾಲೂ ಸಂಜೆಯ ಸಮಯದಲ್ಲಿ ತನ್ನ ಸೋದರನಿಗೆ ಆಕೆ ಫೋನ್ ಮಾಡುತ್ತಿದ್ದಳು. ಆದರೆ ಡಿ.13ರ ಸಂಜೆ ಆಕೆಯ ಫೋನ್ ಬರದ ಕಾರಣ ಸೋದರರು ಆತಂಕಗೊಂಡು ಆಕೆಗೆ ಹುಡುಕಾಟ ಪ್ರಾರಂಭಿಸಿದರು. ಕೊನೆಗೆ ಪೋಲೀಸರಿಗೆ ದೂರು ನೀಡಿದರು. ತನಿಖೆಯ ನಂತರ ಕೊಲೆಯಾಗಿರುವುದು ದೃಢಪಟ್ಟಿದೆ.