ಹೊಸದಿಗಂತ ವರದಿ ಹುಬ್ಬಳ್ಳಿ:
ರಾಷ್ಟ್ರ ಭಕ್ತಿಯನ್ನು ಆರ್ ಎಸ್ ಎಸ್ ನವರು ಬೇರೆಯವರ ಹತ್ತಿರ ಕಲಿಯುವ ಅವಶ್ಯಕತೆಯಿಲ್ಲ. ಪ್ರತಿವರ್ಷ ಎರಡು ರಾಷ್ಟ್ರ ಹಬ್ಬವಾದ ಸ್ವಾತಂತ್ರ್ಯೋತ್ಸವ ಹಾಗೂ ಗಣರಾಜ್ಯೋತ್ಸವ ಅಂಗವಾಗಿ ಆರ್ ಎಸ್ ಎಸ್ ಕಚೇರಿಯ ಮೇಲೆ ರಾಷ್ಟ್ರ ಧ್ವಜ ಹಾರಿಸಲಾಗುತ್ತದೆ ಎಂದು ಆರ್ ಎಸ್ ಎಸ್ ಪ್ರಮುಖ ಅಮರನಾಥ ಹೇಳಿದರು.
ನಗರದಲ್ಲಿ ಆರ್ ಎಸ್ ಎಸ್ ಕಚೇರಿಗೆ ವಿದ್ಯಾನಗರದ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ರಾಷ್ಟ್ರ ಧ್ಜಜ ನೀಡಿ, ಕಚೇರಿ ಮೇಲೆ ಹಾರಿಸಬೇಕು ಎಂದು ಆಗ್ರಹಿಸಲು ಮಂದಾದ ಹಿನ್ನೆಲೆ ಅವರು ಮಾತನಾಡಿದರು.
ಪ್ರಚಾರ ಗಿಟ್ಟಿಸುವ ಸಲುವಾಗಿ ರಾಷ್ಟ್ರ ಭಕ್ತಿ ಮಾಡುವುದು ಸರಿಯಲ್ಲ. ಪ್ರಧಾನಿ ಮೋದಿಯವರು ಹೇಳಿದಂತೆ ರಾಷ್ಟ್ರ ಪ್ರತಿಯೊಬ್ಬರ ಮನೆಯ ಮೇಲೆ ರಾಷ್ಟ್ರ ಧ್ವಜ ಹಾರಿಸಬೇಕು. ಅಷ್ಟೇ ಅಲ್ಲದೆ ಮುಸ್ಲಿಮರ ಮನೆ ಹಾಗೂ ಮಸೀದಿಗಳ ಮೇಲೆ ಹಾರಿಸಬೇಕು ಎಂದು ಆಗ್ರಹಿಸಿದರು.
ವಿದ್ಯಾನಗರದ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತ ತಂದಿದ್ದ ರಾಷ್ಟ್ರ ಧ್ವಜವನ್ನು ಸ್ವೀಕರಿಸಿ ಭಾರತ ಮಾತಾಕೀ ಜೈ ಹಾಗೂ ವಂದೇ ಮಾತರಂ ಎಂದು ಘೋಷಣೆ ಕೂಗಿದರು.
ವಿದ್ಯಾನಗರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ ಮಾತನಾಡಿ, ಪ್ರಧಾನಿ ಮೋದಿಯವರ ಮಾತಿನಂತೆ ಎಲ್ಲ ಕಡೆ ರಾಷ್ಟ್ರ ಧ್ಜಜ ಹಾರಿಸಬೇಕು. ಇದಕ್ಕೆ ಆರ್ ಎಸ್ ಎಸ್ ಕಚೇರಿ ಹೊರತಲ್ಲ. ಆದರಿಂದ ಆರ್ ಎಸ್ ಎಸ್ ಕಚೇರಿಗೆ ಭೇಟಿ ನೀಡಿ ರಾಷ್ಟ್ರ ಧ್ವಜ ಹಾರಿಸಲು ಮನವಿ ಮಾಡಲಾಯಿತು ಎಂದರು.