ಹಿಂದುಳಿದ ವರ್ಗಗಳ ಮಠಾಧೀಶರೊಂದಿಗೆ ಆರೆಸ್ಸೆಸ್‌ ಸರಸಂಘಚಾಲಕರ ಸಂವಾದ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಇಂದು ಚಿತ್ರದುರ್ಗದ ಶ್ರೀ ಶಿವಶರಣ ಮಾದಾರಚನ್ನಯ್ಯ ಗುರುಪೀಠದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ.ಮೋಹನ್ ಭಾಗವತ್ ಅವರು ದಲಿತ, ಹಿಂದುಳಿದ ವರ್ಗಗಳ ೨೧ ಮಠಾಧೀಶರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ನಂತರ ನಡೆದ ಸಂವಾದದಲ್ಲಿ ಅನೇಕ ಸ್ವಾಮೀಜಿಯವರು ಕೇಳಿದ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಮೋಹನ್ ಭಾಗವತ್ ಅವರ ಮಾತಿನ ಸಾರಾಂಶ ಹೀಗಿದೆ :
● ಸಂಘಕ್ಕೆ ಹೆಚ್ಚು ಹೊಂದುವುದು ರಾಜಕೀಯ ಅಲ್ಲ ಬದಲಾಗಿ ಧಾರ್ಮಿಕತೆ ಮತ್ತು ಆಧ್ಯಾತ್ಮಿಕತೆ. ಹಾಗಾಗಿ ಸಂಘಕ್ಕೆ ರಾಜಕೀಯದವರಿಗಿಂತ ಸ್ವಾಮೀಜಿಗಳೇ ಹೆಚ್ಚು ಹತ್ತಿರವಾಗುತ್ತಾರೆ.
● ನಮ್ಮ ಸಮಾಜದಲ್ಲಿ ಕೆಲವು ಭಾಗ ಹಿಂದುಳಿಯಿತು. ಏಕೆಂದರೆ ಅವರೊಂದಿಗಿನ ಸಂಪರ್ಕ ಮುರಿದುಹೋಯಿತು. ಹಿಂದು ಸಮಾಜದ ಎಲ್ಲಾ ಅಂಗಗಳನ್ನು ಸುಸ್ಥಿತಿಯಲ್ಲಿಡಬೇಕಾದುದು ನಮ್ಮ ಕರ್ತವ್ಯ. ಮತ್ತೆ ಮತ್ತೆ ಸೇರುವುದರಿಂದ ಇದು ಸರಿ ಆಗುತ್ತದೆ. ಇದನ್ನೇ ಸಮರಸತೆ ಎನ್ನುವರು. ಸಂಘ ಇದೇ ಪ್ರಯತ್ನ ಮಾಡುತ್ತಿದೆ. ಸಮಾಜದ ಎಲ್ಲಾ ಅಂಗಗಳ ಬಗ್ಗೆ ಸಂವೇದನೆ ಇರಬೇಕು. ಪರಸ್ಪರ ಆಗಾಗ ಸೇರುವುದರಿಂದ ನಮಗೆ ಪರಸ್ಪರರ ಬಗ್ಗೆ ಅರಿವು ಹೆಚ್ಚಾಗುತ್ತದೆ. ಅರಿವು ಹೆಚ್ಚಾದಾಗ ಸಂಶಯಗಳು, ಅಪನಂಬಿಕೆಗಳು ದೂರವಾಗುತ್ತವೆ. ಆಗ ಮನಸ್ಸುಗಳು ಒಂದಾಗುತ್ತವೆ. ರಾ.ಸ್ವ.ಸಂಘ ಮತ್ತು ಮಠಗಳು ಹಾಗೂ ಸ್ವಾಮೀಜಿಗಳೂ ಪರಸ್ಪರ ಮತ್ತೆ ಮತ್ತೆ ಭೇಟಿ ಮಾಡುತ್ತಿರಬೇಕು.
● ಹಿಂದೂ ಸಮಾಜದ ಪ್ರಮುಖ ಸಮಸ್ಯೆಗಳಾದ ಅಸ್ಪೃಶ್ಯತೆ, ವಿಷಮತೆ, ಅಸಮಾನತೆ ಇವುಗಳು ಮುಖ್ಯವಾಗಿ ಇರುವುದು ನಮ್ಮ ಮನಸ್ಸಿನಲ್ಲಿ. ಶಾಸ್ತ್ರಗಳಲ್ಲಿ ಸಮಸ್ಯೆ ಇಲ್ಲ. ಮತ್ತು ಈ ಸಮಸ್ಯೆಗಳು ಹಲವಾರು ಶತಮಾನಗಳಿಂದ ನಮ್ಮ ಮನಸ್ಸಿನಲ್ಲಿ ಉಳಿದಿವೆ. ಹಾಗಾಗಿ ಇದರ ಪರಿಹಾರಕ್ಕೂ ಸಮಯ ತಗುಲುವುದು. ನಿಧಾನವಾಗಿ ಇದನ್ನು ಮನಸ್ಸಿನಿಂದ ತೆಗೆಯುವ ಕೆಲಸವಾಗಬೇಕಿದೆ. ಅಲ್ಲಿಯವರೆಗೂ ಸಹನೆ ಮತ್ತು ಧೈರ್ಯವನ್ನು ನಾವು ಹೊಂದಬೇಕು. ಅದು ಆಗೇ ಆಗುತ್ತದೆ. ಮತ್ತು ಆ ಕಾರ್ಯದಲ್ಲಿ ನಾವು ನಿರತರಾಗಿದ್ದೇವೆ.

● ಭಾರತ ಭಾರತವಾಗಿ ಉಳಿಯಬೇಕಾದರೆ, ನಾವು ನಾವಾಗಿ ಉಳಿಯಬೇಕು. ಇಲ್ಲದಿದ್ದರೆ ಭಾರತ ಭಾರತವಾಗಿ ಉಳಿಯುವುದಿಲ್ಲ. ಹಾಗಾಗಿ ಧರ್ಮವು ಎಲ್ಲಕಡೆ ಓತಪ್ರೋತವಾಗಿ ಇರುವಂತೆ ಆಗಬೇಕು. ಮತಾಂತರ ಆಗುವುದರಿಂದ ನಮ್ಮಲ್ಲಿ ಪ್ರತ್ಯೇಕತೆಯನ್ನು ತರುತ್ತದೆ. ಮೂಲದಿಂದ, ಬೇರಿನಿಂದ ಮತಾಂತರ ಆದವರು ದೂರ ಉಳಿಯುವಂತೆ ಮಾಡುತ್ತದೆ. ಹಾಗಾಗಿ ನಾವು ಮತಾಂತರವನ್ನು ತಡೆಯುವ ಪ್ರಯತ್ನ ಮಾಡಬೇಕು.
● ಸಂಸ್ಕಾರದ ಬಗ್ಗೆಯೂ ಗಮನಹರಿಸಬೇಕಿದೆ. ದೊಡ್ಡವರಿಗೆ ಗೌರವಕೊಡುವುದು, ನಮ್ಮ ಮಾತೆಯರು ಸೋದರಿಯಲ್ಲಿ ಹೇಗೆ ನಡೆದುಕೊಳ್ಳಬೇಕು ಇವುಗಳನ್ನು ನಮ್ಮ ಸಮಾಜದ ಯುವ ಪೀಳಿಗೆಗಳಿಗೆ ಹೇಳಿಕೊಡಬೇಕಿದೆ. ಆಧುನಿಕ ವಿದ್ಯಾಭ್ಯಾಸದೊಂದಿಗೆ ಶಿಕ್ಷಣ ಸಿಗುತ್ತಿದೆ, ಆದರೆ ಸಂಸ್ಕಾರ ಸ್ವಲ್ಪ ದೂರ ಆಗುತ್ತಿದೆ. ಸಂಸ್ಕಾರ, ನಿಷ್ಠೆ ದೃಢವಾಗಬೇಕು ಎಂದರೆ ಏನಾದರೂ ಒಂದು ರೀತಿಯ ಉಪಾಸನೆಯನ್ನು ಜೋಡಿಸಿಕೊಳ್ಳಬೇಕು. ನಿಯಮಿತ ಸಾಧನೆ, ತಪಸ್ಸಿನಲ್ಲಿ ತೊಡಗಿಕೊಂಡ ಸ್ವಾಮೀಜಿಗಳು ಸಮಾಜವನ್ನು ಸಂಸ್ಕಾರವಂತ ಸಮಾಜವನ್ನಾಗಿ ಎಬ್ಬಿಸಿ ನಿಲ್ಲಿಸಬೇಕು. ಎಲ್ಲರೂ ಒಟ್ಟಾಗಿ ಮುನ್ನಡೆಯಬಹುದು, ಮುನ್ನಡೆಯಬೇಕು. ಸೇವೆ ಮತ್ತು ಸಂಸ್ಕಾರದ ಮೂಲಕ ನಾವು ಸಮಾಜವನ್ನು ಕಟ್ಟಿಬೆಳೆಸಬೇಕಿದೆ. ಸತ್ಯದ ಸಾಧನೆ ಮಾಡುತ್ತಾ ಸರ್ವರ ಸೇವೆ ಮಾಡಬೇಕಿದೆ. ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ ಎನ್ನುವಂತೆ ಕಾರ್ಯ ಮಾಡಬೇಕಿದೆ.
● ಇಂದು ಮಠಾಧೀಶರು ಮಾಡುತ್ತಿರುವ ಪ್ರಯತ್ನ ಬೀಜರೂಪದಲ್ಲಿದೆ. ಇದು ಖಂಡಿತವಾಗಿ ಹೆಮ್ಮರವಾಗಿ ಬೆಳೆಯುತ್ತದೆ. ಫಲವನ್ನೂ ನೆರಳನ್ನೂ ನೀಡುತ್ತದೆ. ಮಾತ್ರವಲ್ಲ ಸಾವಿರಾರು ಬೀಜಗಳನ್ನು ಸೃಷ್ಟಿಸಿ ಅವೂ ಭೂಮಿಗೆ ತಾಗಿ ಸಸಿಗಳಾಗಿ ಬೆಳೆದು ಹೆಮ್ಮರವಾಗಿ ನಿಂತು ಫಲಗಳನ್ನೂ ನೀಡುವಂತೆ ಖಂಡಿತವಾಗಿ ಬೆಳೆದೇ ಬೆಳಯುತ್ತವೆ.
● ರಾಷ್ಟ್ರೀಯ ಸ್ವಯಂಸೇವಕ ಸಂಘ ನಿಮ್ಮ ಜೊತೆ ಇದೆ. ಏನೇಬರಲಿ, ಸಂಘ ನಿಮ್ಮ ಜೊತೆ ಇದೆ. ನಮ್ಮದೇ ಒಂದು ಶೈಲಿ ಇದೆ. ಆ ಶೈಲಿಯಲ್ಲೇ ನಾವು ಮಾಡುತ್ತೇವೆ. ಸಂಘದ ರೀತಿ ಅತ್ಯಂತ ಪ್ರಾಕೃತಿಕವಾಗಿದ್ದು. ಸಂಘದ ಗತಿ ನಿಧಾನ ಗತಿ. ನಿಧಾನವಾಗಿ ಹೋದರೆ ದೂರಸಾಗಬಹುದು. ನಿಮ್ಮ ಜೊತೆ ಇದ್ದೇವೆ. ನಿಮ್ಮ ಜೊತೆ ಇರುತ್ತೇವೆ. ನಾವು ದೊಡ್ಡವರು ಎಂಬ ಕಾರಣಕ್ಕಾಗಿ ಅಲ್ಲ. ಬದಲಾಗಿ ಇದು ನಮ್ಮ ಕರ್ತವ್ಯ, ಹಾಗಾಗಿ. ನೀವು ಸಂಘವನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಿ. ನಾವೆಲ್ಲರೂ ಹಿಂದು ಸಮಾಜದ ಅವಿಭಾಜ್ಯ ಅಂಗ.

ಕಾರ್ಯಕ್ರಮದಲ್ಲಿ ಜಗದ್ಗುರು ಡಾ. ಶ್ರೀ ಶಾಂತವೀರ ಮಹಾಸ್ವಾಮೀಜಿ, ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮೀಜಿ, ಜಗದ್ಗುರು ಶ್ರೀ ಡಾ.ಪುರುಷೋತ್ತಮಾನಂದ ಸ್ವಾಮೀಜಿ, ಜಗದ್ಗುರು ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ, ಜಗದ್ಗುರು ಶ್ರೀ ಬಸವ ಮಾಚಿದೇವ ಮಹಾಸ್ವಾಮೀಜಿ, ಶ್ರೀ ಅನ್ನದಾನಿ ಭಾರತೀ ಅಪ್ಪಣ್ಣ ಸ್ವಾಮೀಜಿ, ಶ್ರೀ ಬಸವಕುಂಬಾರ ಗುಂಡಯ್ಯ ಸ್ವಾಮೀಜಿ, ಜಗದ್ಗುರು ಶ್ರೀ ರೇಣುಕಾನಂದ ಮಹಾಸ್ವಾಮೀಜಿ, ಜಗದ್ಗುರು ಶ್ರೀ ವೇಮನಾನಂದ ಮಹಾಸ್ವಾಮೀಜಿ, ಜಗದ್ಗುರು ಶ್ರೀ ಶಾಂತಭೀಷ್ಮ ಅಂಬಿಗರ ಚೌಡಯ್ಯ ಮಹಾಸ್ವಾಮೀಜಿ, ಜಗದ್ಗುರು ಶ್ರೀ ಬಸವ ಭೃಂಗೀಶ್ವರ ಮಹಾಸ್ವಾಮೀಜಿ, ಜಗದ್ಗುರು ಡಾ. ಶ್ರೀ ಬಸವಕುಮಾರ ಮಹಾಸ್ವಾಮೀಜಿ, ಜಗದ್ಗುರು ಶ್ರೀ ದಯಾನಂದಪುರಿ ಮಹಾಸ್ವಾಮೀಜಿ, ಜಗದ್ಗುರು ಶ್ರೀ ಇಮ್ಮಡಿ ಕೇತೇಶ್ವರ ಮಹಾಸ್ವಾಮೀಜಿ, ಜಗದ್ಗುರು ಶ್ರೀ ಬಸವ ನಾಗೀದೇವ ಮಹಾಸ್ವಾಮೀಜಿ, ಪರಮಪೂಜ್ಯ ಶ್ರೀ ಜ್ಞಾನಾನಂದ ಪುರಿ ಮಹಾಸ್ವಾಮೀಜಿ, ಪರಮ ಪೂಜ್ಯ ಶ್ರೀ ಮಾತಾ ಬಿಸ್ಠದೇವಿಯವರು, ಪರಮಪೂಜ್ಯ ಬಸವ ಅರಳಯ್ಯ ಸ್ವಾಮೀಜಿ, ಪರಮಪೂಜ್ಯ ಶ್ರೀ ಪೂರ್ಣಾನಂದ ಭಾರತೀ ಸ್ವಾಮೀಜಿ, ಪರಮಪೂಜ್ಯ ಶ್ರೀ ಶ್ರೀಧರಾನಂದ ಸ್ವಾಮೀಜಿ ಆದಿಯಾಗಿ ದಲಿತ, ಹಿಂದುಳಿದ ವರ್ಗಗಳ ೨೧ ವಿವಿಧ ಮಠಾಧೀಶರು, ಪೂಜ್ಯರು ಭಾಗವಹಿಸಿದ್ದರು. ಇದರ ನೇತೃತ್ವ ವಹಿಸಿದ್ದ ಪೂಜ್ಯ ಶ್ರೀ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಯವರು ಎಲ್ಲರನ್ನೂ ಸ್ವಾಗತಿಸಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾ. ತಿಪ್ಪೇಸ್ವಾಮಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ರವಿ ಮಲ್ಲಾಪುರ ವಂದಿಸಿದರು. ಆರೆಸ್ಸೆಸ್ನ ಸಹಸರಕಾರ್ಯವಾಹರಾದ ಮುಕುಂದ, ಕ್ಷೇತ್ರೀಯ ಪ್ರಚಾರಕರಾದ ಸುಧೀರ, ಕ್ಷೇತ್ರೀಯ ಕಾರ್ಯವಾಹ ನಾ.ತಿಪ್ಪೇಸ್ವಾಮಿ, ಪಟ್ಟಾಭಿರಾಮ, ಗುರುಪ್ರಸಾದ, ನಂದೀಶ, ಸಾಮರಸ್ಯ ವೇದಿಕೆಯ ವಾದಿರಾಜ, ವಿ.ಹಿಂ.ಪರಿಷತ್ ನ ಬಸವರಾಜ ಸಂವಾದ ಸಭೆಯಲ್ಲಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!