ಹೊಸದಿಗಂತ ಡಿಜಿಟಲ್ ಡೆಸ್ಕ್
ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಕದನ 26 ನೇ ದಿನವೂ ಮುಂದುವರೆದಿದೆ. ಮರಿಯಾಪೋಲ್ ವಶಪಡಿಸಿಕೊಳ್ಳುವ ಸಂಬಂಧ ರಷ್ಯಾ ನೀಡಿದ್ದ ಶರಣಾಗತಿ ಗಡುವನ್ನು ಉಕ್ರೇನ್ ತಿರಸ್ಕರಿಸಿದೆ.
ಶಸ್ತ್ರಗಳನ್ನು ತ್ಯಜಿಸಿ ಶರನಾಗುವಂತೆ ರಷ್ಯಾವು ಭಾನುವಾರ ರಾತ್ರಿ ಮರಿಯಾಪೋಲ್ ಆಡಳಿತ ವರ್ಗಕ್ಕೆ ಸೂಚನೆ ನೀಡಿತ್ತು. ಸೋಮವಾರ ಬೆಳಗ್ಗೆ 5 ಗಂಟೆ (ಭಾರತೀಯ ಕಾಲಮಾನ ಬೆಳಿಗ್ಗೆ 8 ಗಂಟೆ)ವರೆಗೆ ಶರಣಾಗತಿಗೆ ಗಡುವು ನೀಡಿತ್ತು. ಆದರೆ ರಷ್ಯಾ ಪ್ರಸ್ತಾಪವನ್ನು ಉಕ್ರೇನ್ ಆಡಳಿತ ಸ್ಪಷ್ಟವಾಗಿ ತಿರಸ್ಕರಿಸಿದೆ. ಯಾವುದೇ ಕಾರಣಕ್ಕೂ ಶರಣಾಗತಿ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಉಕ್ರೇನ್ನ ಉಪ ಪ್ರಧಾನಿ ಐರಿನಾ ವೆರೆಶ್ಚುಕ್ ಪ್ರತಿಕ್ರಿಯೆ ನೀಡಿದ್ದು, ರಷ್ಯಾಕ್ಕೆ ನಾವು ಶರಣಾಗುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಪರಿಸ್ಥಿತಿ ಎಂತಹದ್ದೇ ಬಂದರೂ ನಾವು ಶರಣಾಗತಿ ಅಥವಾ ಶಸ್ತ್ರಾಸ್ತ್ರಗಳನ್ನು ತ್ಯಜಿಸುವುದನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ.
ನಮ್ಮ ನಿಲುವನ್ನು ರಷ್ಯಾಕ್ಕೆ ಸ್ಪಷ್ಟಪಡಿಸಿದ್ದೇವೆ. ರಷ್ಯಾ ಮರಿಯಾಪೋಲ್ ನಲ್ಲಿ ಮಾನವೀಯ ಕಾರಿಡಾರ್ ತೆರೆದು ಜನರ ಜೀವ ರಕ್ಷಣೆಗೆ ಅನವು ಮಾಡಿಕೊಡಲಿ ಎಂದು ಐರಿನಾ ವೆರೆಶ್ ಚುಕ್ ಹೇಳಿದ್ದಾರೆ.
ರಷ್ಯಾದ ಸೇನಾಪಡೆಗಳು ಭಾನುವಾರ ರಾತ್ರಿ ಉಕ್ರೇನ್ ರಾಜಧಾನಿ ಕೈವ್ ಜನವಸತಿ ವಸತಿ ಪ್ರದೇಶಗಳ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಹಲವಾರು ಮಂದಿ ಸಾವಿಗೀಡಾಗಿದ್ದು, ನಾಗರೀಕರ ಮನೆಗಳು ಮತ್ತು ಪ್ರಮುಖ ಕಟ್ಟಡಗಳು ಧ್ವಂಸಗೊಂಡಿವೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ