ಹೊಸದಿಗಂತ ವರದಿ,ಶಿವಮೊಗ್ಗ:
ರಾಮಮಂದಿರ ಏಕೆ ಬೇಡ? ಕೃತಿ ವಿವಾದದ ಹಿನ್ನೆಲೆಯಲ್ಲಿ ಸಾಹಿತಿ ಕೆ.ಎಸ್. ಭಗವಾನ್ ಮಂಗಳವಾರ ಸಾಗರ ನ್ಯಾಯಾಲಯಕ್ಕೆ ಹಾಜರಾದರು. ಇಲ್ಲಿನ ಐದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ.
ರಾಮಮಂದಿರ ಏಕೆ ಬೇಡ ಎಂಬ ಕೃತಿಯಿಂದ ನಮ್ಮ ಮನಸ್ಸಿಗೆ ಘಾಸಿಯಾಗಿದೆ ಎಂದು ಇಕ್ಕೇರಿ ಮಹಾಬಲೇಶ್ವರ ಎಂಬುವವರು ಜೆಎಂಎಫ್ಸಿ ನ್ಯಾಯಾಲಯದಲ್ಲಿ ಖಾಸಗಿ ಪ್ರಕರಣ ದಾಖಲಿಸಿದ್ದರು.
ನ್ಯಾಯಾಲಯ ಭಗವಾನ್ ವಿರುದ್ಧ ಐಪಿಸಿ ಸೆಕ್ಷನ್ 295 (ಎ) ಅಡಿಯಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ಸಂಬಂಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಿ ದಿನಾಂಕ 02-11-2022ರಂದು ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಮೈಸೂರು ಎಸ್.ಪಿ. ಮೂಲಕ ಸಮನ್ಸ್ ಜಾರಿ ಮಾಡಿತ್ತು. ಕೆ.ಎಸ್. ಭಗವಾನ್ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ.
ಇದರಿಂದ ನ್ಯಾಯಾಲಯ ಭಗವಾನ್ ಅವರ ವಿರುದ್ಧ ಜಾಮೀನುರಹಿತ ಬಂಧನ ವಾರೆಂಟ್ ಆದೇಶ ಮಾಡಿತ್ತು. ಈ ಸಂಬಂಧ ಭಗವಾನ್ ಅವರು ನಿರೀಕ್ಷಣಾ ಜಾಮೀನು ಕೋರಿ 5ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಭಗವಾನ್ ಅವರಿಗೆ ಷರತ್ತುಬದ್ದ ಜಾಮೀನು ಮಂಜೂರು ಮಾಡಿ 10 ದಿನಗಳ ಒಳಗೆ ಪೊಲೀಸ್ ಮುಂದೆ ಹಾಜರಾಗುವಂತೆ, 1 ಲಕ್ಷ ರೂ. ವೈಯಕ್ತಿಕ ಬಾಂಡ್ ನೀಡುವಂತೆ ಆದೇಶ ಮಾಡಿತ್ತು.
ಮಂಗಳವಾರ ಭಗವಾನ್ ಸಾಗರ ನ್ಯಾಯಾಲಯಕ್ಕೆ ಹಾಜರಾಗಿ ರೆಗ್ಯೂಲರ್ ಜಾಮೀನಿಗೆ ಅರ್ಜಿ ಸಲ್ಲಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಶ್ರೀಶೈಲ ಬಗಾಡೆ ರೆಗ್ಯೂಲರ್ ಜಾಮೀನು ನೀಡಿದರು. ದೂರುದಾರರ ಪರ ನ್ಯಾಯವಾದಿ ಕೆ.ವಿ. ಪ್ರವೀಣ್ ವಾದ ಮಂಡಿಸಿದರೆ, ಭಗವಾನ್ ಪರವಾಗಿ ಎಚ್.ಬಿ. ರಾಘವೇಂದ್ರ ಮತ್ತು ಅಬ್ದುಲ್ ರಶೀದ್ ವಾದ ಮಂಡಿಸಿದರು.