ಹೊಸದಿಗಂತ ವರದಿ, ಮಡಿಕೇರಿ:
ವೀರಾಜಪೇಟೆ ನಗರ ಪೊಲೀಸ್ ಠಾಣೆ ಸರಹದ್ದಿನಲ್ಲಿ ಅಕ್ರಮವಾಗಿ ಮಾದಕ ವಸ್ತುಗಳನ್ನು ಮಾರಾಟ/ಸರಬರಾಜು ಮಾಡುತಿದ್ದ ಮೂವರನ್ನು ಕೊಡಗು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಕೇರಳ ಮೂಲದ, ವೀರಾಜಪೇಟೆ ಮೀನುಪೇಟೆ ನಿವಾಸಿ ಷಂಶುದ್ದೀನ್ (36), ಎಡಪಾಲ ಗ್ರಾಮದ ಸಿ.ವೈ.ಇಸಾಕ್ (34) ಎಂ.ಜಿ.ನಂದಕುಮಾರ್ (45) ಬಂಧಿತ ಆರೋಪಿಗಳಾಗಿದ್ದು, ಷಂಶುದ್ದೀನ್ ಬಳಿಯಿಂದ 582 ಗ್ರಾಂ, ಇತರ ಇಬ್ಬರಿಂದ 2 ಕೆ.ಜಿ 378 ಗ್ರಾಂ ಗಾಂಜಾ ನಿಷೇದಿತ ಮಾದಕ ವಸ್ತು, ಕೃತ್ಯಕ್ಕೆ ಬಳಸಿದ ಒಂದು ದ್ವಿ-ಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ತಿಳಿಸಿದ್ದಾರೆ.
ವೀರಾಜಪೇಟೆಯ ಮೀನುಪೇಟೆಯಲ್ಲಿ ನಿಷೇಧಿತ ಮಾದಕ ವಸ್ತು ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಬುಧವಾರ ದಾಳಿ ನಡೆಸಿದ ಪೊಲೀಸರು ಕೇರಳ ಮೂಲದ ವೀರಾಜಪೇಟೆ ಮೀನುಪೇಟೆ ನಿವಾಸಿ ಶಂಷುದ್ದೀನ್’ನನ್ನು 582 ಗ್ರಾಂ ಗಾಂಜಾದೊಂದಿಗೆ ಬಂಧಿಸಿದ್ದರೆ,ಪೆರುಂಬಾಡಿಯ ನವನಗರದ ಬಸ್ ನಿಲ್ದಾಣದಲ್ಲಿ ನಿಷೇಧಿತ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಎಡಪಾಲ ಗ್ರಾಮದ ಸಿ.ವೈ.ಇಸಾಕ್ ಮತ್ತು ಎಂ.ಜಿ.ನಂದಕುಮಾರ್ ಎಂಬವರನ್ನು 2 ಕೆ.ಜಿ 378 ಗ್ರಾಂ ಗಾಂಜಾ, ಕೃತ್ಯಕ್ಕೆ ಬಳಸಿದ ಒಂದು ದ್ವಿ-ಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ವೀರಾಜಪೇಟೆ ಉಪ ವಿಭಾಗದ ಡಿವೈಎಸ್ಪಿ ಆರ್. ಮೋಹನ್ ಕುಮಾರ್ ಹಾಗೂ ವೀರಾಜಪೇಟೆ ವೃತ್ತ ನಿರೀಕ್ಷಕ ಬಿ.ಎಸ್. ಶಿವರುದ್ರ ಅವರ ಮಾರ್ಗದರ್ಶನದಲ್ಲಿ ವೀರಾಜಪೇಟೆ ನಗರ ಪೊಲೀಸ್ ಠಾಣಾಧಿಕಾರಿ ರವೀಂದ್ರ ಮತ್ತು ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತನಿಖಾ ತಂಡ ಆರೋಪಿಗಳನ್ನು ಬಂಧಿಸಿದ್ದು, ಅವರ ಕಾರ್ಯವನ್ನು ಶ್ಲಾಘಿಸುವುದಾಗಿ ರಾಮರಾಜನ್ ತಿಳಿಸಿದ್ದಾರೆ.