ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುಪಿ ಸರ್ಕಾರದ ವಿರುದ್ಧ ಸಮಾಜವಾದಿ ಪಕ್ಷ (ಎಸ್ಪಿ) ಸೋಮವಾರ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನಾ ಮೆರವಣಿಗೆಯನ್ನು ಕೈಗೊಂಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ವಿಧಾನಸಭೆಯಲ್ಲಿ ಹೆಚ್ಚಿನ ಸಂಖ್ಯೆಯ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
ಇಂದು ರಾಜ್ಯ ವಿಧಾನಸಭೆಯ ಮುಂಗಾರು ಅಧಿವೇಶನ ಪ್ರಾರಂಭವಾಗುವ ಮೊದಲೇ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಪಕ್ಷದ ಹಲವು ಶಾಸಕರು ಮತ್ತು ಮುಖಂಡರು ಪಕ್ಷದ ಕಚೇರಿಯಿಂದ ವಿಧಾನಸೌಧದವರೆಗೆ ರಾಜ್ಯದ ಸಮಸ್ಯೆಗಳನ್ನು ಎತ್ತಿ ಹಿಡಿದು ಮೆರವಣಿಗೆ ನಡೆಸಿದರು. ಸಾರ್ವಜನಿಕ ಹಿತಾಸಕ್ತಿಯ ವಿವಿಧ ವಿಷಯಗಳ ಕುರಿತು ಪ್ರತಿಭಟನೆ ನಡೆಸಲು ನಾವು ಇಲ್ಲಿಗೆ ಬಂದಿದ್ದೇವೆ, ಇದು ನಮ್ಮ ಸಾಂವಿಧಾನಿಕ ಹಕ್ಕು, ಆದರೆ ಬಿಜೆಪಿ ಶಾಸಕರನ್ನು ವಿಧಾನಸಭೆಗೆ ಹೋಗಲು ಬಿಡುತ್ತಿಲ್ಲ ಎಂದು ಪಕ್ಷದ ಮುಖಂಡರೊಬ್ಬರು ಆರೋಪಿಸಿದರು.
ಅಖಿಲೇಶ್ ಯಾದವ್ ನೇತೃತ್ವದ ಪ್ರತಿಭಟನೆಗೆ ತಿರುಗೇಟು ನೀಡಿದ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಶಾದ್ ಮೌರ್ಯ ಎಸ್ಪಿಯ ಪ್ರತಿಭಟನೆಯು ಸಾಮಾನ್ಯ ಜನರ ಪ್ರಯೋಜನಕ್ಕೆ ಸಂಬಂಧಿಸಿಲ್ಲ ಎಂದರು. ಈ ಬಗ್ಗೆ ಚರ್ಚಿಸಲು ಬಯಸಿದರೆ, ವಿಧಾನಸಭೆಯಲ್ಲಿ ಬಂದು ಅದರ ಬಗ್ಗೆ ಮಾತನಾಡಲು ಸರ್ವ ಸ್ವತಂತ್ರರು. ನಮ್ಮ ಸರ್ಕಾರ ಚರ್ಚೆಗೆ ಸಿದ್ಧವಾಗಿದೆ, ಇಂತಹ ಪ್ರತಿಭಟನೆಗಳು ಜನರಿಗೆ ಸಮಸ್ಯೆಗಳನ್ನು ಮಾತ್ರ ಸೃಷ್ಟಿಸುತ್ತವೆ. ಪಕ್ಷಕ್ಕೆ ಈಗ ಕೆಲಸವಿಲ್ಲದಂತಾಗಿದೆ ಅದಕ್ಕೆ ಇಂತಹ ಕೆಲಸಕ್ಕೆ ಕೈಹಾಕುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.