ಹೊಸದಿಗಂತ ಡಿಜಿಟಲ್ ಡೆಸ್ಕ್
ಜೈಪುರ: ದೇಶದಾದ್ಯಂತ ಹುಲಿಗಳಿಗೆ ಹೆಸರುವಾಸಿಯಾಗಿರುವ ಅಲ್ವಾರ್ನ ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದು ಭೀಕರ ಸ್ವರೂಪ ಪಡೆಯುತ್ತಿದ್ದು, ಇನ್ನಷ್ಟು ವ್ಯಾಪಿಸುವುದನ್ನು ನಿಯಂತ್ರಿಸಲು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ಗಳ ನೆರವು ಪಡೆಯಲಾಗುತ್ತಿದೆ.
ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಭಾನುವಾರ ರಾತ್ರಿ ಭೀಕರ ಬೆಂಕಿ ಕಾಣಿಸಿಕೊಂಡಿದ್ದು, ಆ ಪ್ರದೇಶದ ಹುಲಿಗಳು ಸೇರಿದಂತೆ ಇತರ ವನ್ಯಪ್ರಾಣಿಗಳ ಜೀವಕ್ಕೆ ಅಪಾಯವಿದೆ. ಅರಣ್ಯ ಇಲಾಖೆ ಮತ್ತು ಸರಿಸ್ಕಾ ಆಡಳಿತ ಬೆಂಕಿಯನ್ನು ನಿಯಂತ್ರಿಸುವಲ್ಲಿ ತೊಡಗಿದೆ. ಬೆಂಕಿ ಎಷ್ಟು ಭೀಕರವಾಗಿದೆಯೆಂದರೆ ಅದು ಹಲವಾರು ಕಿಲೋಮೀಟರ್ ಪ್ರದೇಶದಲ್ಲಿ ವ್ಯಾಪಿಸಿದೆ. ಸುತ್ತಮುತ್ತಲಿನ ಗ್ರಾಮಗಳಿಗೂ ಬೆಂಕಿ ವ್ಯಾಪಿಸುವ ಸಾಧ್ಯತೆ ಇದೆ.
ಅರಣ್ಯ ಪ್ರದೇಶದಲ್ಲಿ ಉರಿಯುತ್ತಿರುವ ಬೆಂಕಿಯನ್ನು ನಂದಿಸಲು ವಾಯುಪಡೆಯ ಎರಡು ಹೆಲಿಕಾಪ್ಟರ್ಗಳನ್ನು ಕರೆಸಲಾಗಿದೆ ಎಂದು ಅಲ್ವಾರ್ನ ಎಡಿಎಂ ಸುನೀತಾ ಪಂಕಜ್ ಹೇಳಿದ್ದಾರೆ. ಎಲ್ಲಿ ಗರಿಷ್ಠ ಬೆಂಕಿ ವ್ಯಾಪಿಸಿದೆ ಅಥವಾ ವನ್ಯಜೀವಿಗಳಿಗೆ ಹೆಚ್ಚಿನ ಅಪಾಯವಿದೆಯೋ ಅಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಬೆಂಕಿ ಹೆಚ್ಚಾಗದಂತೆ ಆ ಸ್ಥಳಗಳಲ್ಲಿ ಮೊದಲು ನೀರು ಸುರಿಯಲಾಗುತ್ತಿದೆ. ಸಿಲಿಸೆಧ್ ಸರೋವರದಿಂದ ನೀರನ್ನು ಪಡೆಯಲಾಗುತ್ತಿದೆ.
ಅಲ್ವಾರ್ನ ಸರಿಸ್ಕಾ ಹುಲಿ ಸಂರಕ್ಷಿತ ಪ್ರದೇಶವು ದೇಶದಾದ್ಯಂತ ಹುಲಿಗಳಿಗೆ ಹೆಸರುವಾಸಿಯಾಗಿದೆ. ಅರಣ್ಯ ಪ್ರದೇಶದಲ್ಲಿ ಬೆಂಕಿಯಿಂದಾಗಿ, ಇಲ್ಲಿ ವಾಸಿಸುವ ವನ್ಯಜೀವಿಗಳು ಮತ್ತು ವಿಶೇಷವಾಗಿ ಹುಲಿಗಳು ಸಹ ತೊಂದರೆಗೊಳಗಾಗಬಹುದು. ಇದರ ಬಗ್ಗೆ ಆಡಳಿತವು ತುಂಬಾ ಗಂಭೀರವಾಗಿದೆ. ಅಗ್ನಿ ಅವಘಡದ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಪ್ರದೇಶಗಳಿಗೂ ಎಚ್ಚರಿಕೆ ನೀಡಲಾಗಿದೆ. ಇದಲ್ಲದೆ, ಅಲ್ವಾರ್ನಿಂದ ಅಗ್ನಿಶಾಮಕ ದಳದ ತಂಡಗಳು ನಿರಂತರವಾಗಿ ಕಾರ್ಯಾಚರಣೆಯಲ್ಲಿ ತೊಡಗಿವೆ.