ಹೊಸದಿಗಂತ ವರದಿ, ಬೆಂಗಳೂರು(ಕಲಬುರಗಿ)
ಹಿಂದೂ ಧರ್ಮದ ಬಗ್ಗೆ ಸತೀಶ್ ಜಾರಕಿಹೊಳಿ ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದು ಖಂಡನೀಯವಾಗಿದೆ.ಕೂಡಲೇ ಅವರು ಹಿಂದೂ ಧರ್ಮೀಯರ ಕ್ಷಮೆಯಾಚಿಸಬೇಕು ಎಂದು ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ ಆಗ್ರಹಿಸಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಅವಹೇಳನಕಾರಿ ಹೇಳಿಕೆಯಲ್ಲಿ ಕಾಂಗ್ರೆಸ್ ಪಕ್ಷದ ಮನಸ್ಥಿತಿ ಎದ್ದು ತೋರುತ್ತದೆ. ಕಾಂಗ್ರೆಸ್ ಮೊದಲಿನಿಂದಲೂ ಹಿಂದೂ ಧರ್ಮವನ್ನು ಕಡೆಗಣಿಸುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.
ಸತೀಶ್ ಜಾರಕಿಹೊಳಿ ಅವರು ಕೇವಲ ಹಿಂದೂ ಧರ್ಮ ಮಾತ್ರವಲ್ಲ. ನಮ್ಮ ಪೂವ೯ಜರಿಗೂ ಅವಮಾನ ಮಾಡಿದ್ದಾರೆ. ಸುಪ್ರೀಂಕೋರ್ಟ್ ಕೂಡ ಹಿಂದೂ ಧರ್ಮ ಅಂದರೆ ವೇ-ಆಫ್-ಲೈಫ್ (ಜೀವನ ಮಾರ್ಗ) ಎಂದು ಹೇಳಿದೆ. ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಕೂಡ ಹಿಂದೂಗಳು ಒಗ್ಗೂಡಿ ಬಾಳಬೇಕು ಎಂದು ಹೇಳಿದ್ದು, ಹಿಂದೂ ಧರ್ಮದಲ್ಲಿ ಹುಟ್ಟಿ, ಅದೇ ಧಮ೯ದ ಬಗ್ಗೆ ಅವಹೇಳನ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸತೀಶ್ ಜಾರಕಿಹೊಳಿ ಬೇಷರತ್ತಾಗಿ ಕ್ಷಮೇ ಕೇಳಬೇಕು. ಕೇಳದಿದ್ದರೆ ರಾಜ್ಯಾದ್ಯಂತ ಅವರ ಮೇಲೆ ದೂರು ದಾಖಲಿಸಲಾಗುವುದು ಎಂದ ಅವರು, ಸತೀಶ್ ಜಾರಕಿಹೊಳಿ ಸಮಾಜದಲ್ಲಿ ಒಡಕು ಮಾಡುವ ಕೆಲಸ ಮಾಡುತ್ತಿದ್ದು, ಅವರನ್ನು ಹಿಂದೂ ಧರ್ಮ ವಿರೋಧಿಸುತ್ತದೆ ಎಂದರು. ಕಾಂಗ್ರೆಸ್ ಪಕ್ಷ ಒಂದು ಕಡೇ ಭಾರತ ಜೋಡೋ ಎಂದು ಹೇಳುತ್ತದೆ. ಆದರೆ ಮಾಡುತ್ತಿರುವದು ತೋಡೋ ಮಾತ್ರ ಎಂದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ