ಹೊಸದಿಗಂತ ಡಿಜಿಟಲ್ ಡೆಸ್ಕ್:
ಅನಧಿಕೃತವಾಗಿ ನಿರ್ಮಿಸಿದ ಕಾರಣಕ್ಕೆ ಕೆಡವಲು ಮುಂದಾಗಿದ್ದ ರೆಸ್ಟೋರೆಂಟ್ಗೆ ನ್ಯಾಯಾಲಯದ ಆದೇಶವು ತಾತ್ಕಾಲಿಕ ಪರಿಹಾರವನ್ನು ನೀಡಿದೆ. ಬುಲ್ಡೋಜರ್ಗಳ ಮೂಲಕ ಕೆಡವಲು ಸಿದ್ಧವಾಗಿದ್ದ ಅಧಿಕಾರಿಗಳು ಸುಪ್ರೀಂಕೋರ್ಟ್ ತಡೆಯಾಜ್ಞೆಯಿಂದ ಹಿಂದೆ ಸರಿದಿದ್ದಾರೆ.
ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಹತ್ಯೆಯ ಬಳಿಕ ಇತ್ತೀಚೆಗೆ ಗಮನ ಸೆಳೆದ ಗೋವಾದ ರೆಸ್ಟೋರೆಂಟ್ ಕರ್ಲಿ. ಸೋನಾಲಿ ಹತ್ಯೆಯಾದ ಈ ರೆಸ್ಟೋರೆಂಟ್ ನಲ್ಲಿ ಡ್ರಗ್ಸ್ ಪೂರೈಕೆಯಾಗುತ್ತಿರುವುದು ಪತ್ತೆಯಾಗಿದೆ. ಹಾಗಾಗಿ ಗೋವಾ ಅಧಿಕಾರಿಗಳು ಈ ರೆಸ್ಟೋರೆಂಟ್ಗೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಪರಿಶೀಲಿಸಿದರು. ಪರಿಶೀಲನೆ ವೇಳೆ ಈ ರೆಸ್ಟೋರೆಂಟ್ ಅಕ್ರಮ ಎಂದು ಕಂಡುಬಂದಿದೆ. ಕೂಡಲೇ ಕೋಸ್ಟಲ್ ರೆಗ್ಯುಲೇಷನ್ ಝೋನ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ನೋಟಿಸ್ ನೀಡಿದ ಗೋವಾ ಅಧಿಕಾರಿಗಳು ಕೆಡವಲು ಸಕಲ ಸಿದ್ಧತೆ ನಡೆಸಿದ್ದರು. ಆದರೆ, ಕರ್ಲಿ ರೆಸ್ಟೋರೆಂಟ್ ಮಾಲೀಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಕೆಡವುವುದನ್ನು ನಿಲ್ಲಿಸುವಂತೆ ಮನವಿ ಸಲ್ಲಿಸಿದರು.
ಗುರುವಾರ ನೋಟಿಸ್ ನೀಡಿ ಶುಕ್ರವಾರವೇ ಕೆಡವುತ್ತಿದ್ದಾರೆ ಎಂದು ರೆಸ್ಟೋರೆಂಟ್ ಮಾಲೀಕರು ನ್ಯಾಯಾಲಯದ ಗಮನಕ್ಕೆ ತಂದರು. ಸುಪ್ರೀಂ ಕೋರ್ಟ್ ಶುಕ್ರವಾರ ತುರ್ತು ವಿಚಾರಣೆ ನಡೆಸಿ ಧ್ವಂಸಕ್ಕೆ ತಡೆಯಾಜ್ಞೆ ನೀಡಿದೆ. ಆದರೆ ಈ ರೆಸ್ಟೋರೆಂಟ್ಗೆ ಎಲ್ಲಾ ರೀತಿಯ ವಾಣಿಜ್ಯ ಪರವಾನಗಿಗಳನ್ನು ರದ್ದುಗೊಳಿಸುವಂತೆ ಸೂಚಿಸಿದೆ. ಬುಧವಾರದೊಳಗೆ ಈ ವಿಚಾರದಲ್ಲಿ ತನ್ನ ನಿಲುವು ತಿಳಿಸುವಂತೆಯೂ ಸರ್ಕಾರಕ್ಕೆ ಸೂಚಿಸಿದೆ.