ಹೊಸದಿಗಂತ ಡಿಜಿಟಲ್ ಡೆಸ್ಕ್:
ಗದ್ದೆಗಳಿಗೆ ಹಾಕಿದ ಬೆಂಕಿಯು ಶಾಲಾ ಬಸ್ಗೆ ತಗುಲಿದ ಪರಿಣಾಮ ಇಬ್ಬರು ವಿದ್ಯಾರ್ಥಿಗಳಿಗೆ ಗಾಯವಾಗಿರುವ ಘಟನೆ ಪಂಜಾಬ್ ನ ಗುರುದಾಸ್ ಪುರದ ಬಳಿ ನಡೆದಿದೆ.
ಶಾಲೆಯಿಂದ ವಿದ್ಯಾರ್ಥಿಗಳನ್ನು ವಾಪಸ್ ಕರೆತರುತ್ತಿದ್ದ ಬಸ್ ಗದ್ದೆಗಳ ನಡುವಿನ ಕಡಿದಾದ ರಸ್ತೆಗಳಲ್ಲಿ ಚಲಿಸುತ್ತಿತ್ತು. ಈ ಸಂದರ್ಭದಲ್ಲಿ ಜೋರಾಗಿ ಗಾಳಿ ಬೀಸಿದ ಪರಿಣಾಮ ಬೆಂಕಿಯ ಕೆನ್ನಾಲಿಗೆ ಬಸ್ ಗೆ ಆವರಿಸಿಕೊಂಡಿದೆ. ತಕ್ಷಣವೇ ಬಸ್ ಚಾಲಕ ಜಾಗರೂಕನಾಗಿ ವಿದ್ಯಾರ್ಥಿಗಳನ್ನು ಬಸ್ ನಿಂದ ಪಾರು ಮಾಡಲು ಪ್ರಯತ್ನಿಸಿದನಾದರೂ ಕೆಲವರಿಗೆ ಗಾಯಗಳಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಸಾಮಾನ್ಯವಾಗಿ ಎಪ್ರಿಲ್, ಮೇ ತಿಂಗಳುಗಳಲ್ಲಿ ಫಸಲು ಕಟಾವಿನ ನಂತರ ಪಂಜಾಬ್ ನ ರೈತರು ತಮ್ಮ ಗದ್ದೆಗಳಿಗೆ ಬೆಂಕಿ ಹಾಕುತ್ತಾರೆ. ಸಮಯ ಮತ್ತು ಹಣದ ಕೊರತೆಯಿಂದಾಗಿ ವಿಶಾಲವಾದ ಗದ್ದೆಗಳನ್ನು ನಿರ್ವಹಿಸಲು ಕಷ್ಟವಾಗುವುದರಿಂದ ಚಳಿಗಾಲದ ಬಿತ್ತನೆಗೆ ಅಣಿಗೊಳಿಸಲು ಗದ್ದೆಗಳಿಗೆ ಬೆಂಕಿ ಹಾಕಲಾಗುತ್ತದೆ. ಈ ಬೆಂಕಿಯ ಹೊಗೆ ವಿಸ್ತಾರವಾದ ಪ್ರದೇಶಗಳಲ್ಲಿ ಆವರಿಸಿಕೊಳ್ಳುತ್ತದೆ. ದೆಹಲಿಯ ವಾಯು ಮಾಲಿನ್ಯಕ್ಕೂ ಈ ಹೊಗೆ ಕಾರಣವಾಗುತ್ತದೆ.