ಹೊಸದಿಗಂತ ವರದಿ, ಶಿವಮೊಗ್ಗ:
ಸಾಗರ- ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ರಾತ್ರಿ ಸರಣಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಅದೃಷ್ಟವಶಾತ್ ಖಾಸಗಿ ಬಸ್ ನಲ್ಲಿದ್ದ 50 ಕ್ಕೂ ಹೆಚ್ಚು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ತಾಲೂಕಿನ ಚೋರಡಿ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ. ಸಾಗರ ಕಡೆಯಿಂದ ಬಂದ ಖಾಸಗಿ ಬಸ್, ಚೋರಡಿ ಗ್ರಾಮದಲ್ಲಿ ಪ್ರಯಾಣಿಕರು ಇಳಿಯಲು ನಿಲ್ಲಿಸಲಾಗಿತ್ತು. ಈ ವೇಳೆ ಹಿಂಬದಿಯಿಂದ ಗೂಡ್ಸ್ ಆಟೋ ಬಂದಿದೆ. ಅದರ ಹಿಂದೆ ಬಂದ ಕೆಂಪು ಇಟ್ಟಿಗೆ ತುಂಬಿದ್ದ ಲಾರಿ ಚಾಲಕ ಗೂಡ್ಸ್ ಆಟೋವನ್ನು ಓವರ್ ಟೇಕ್ ಮಾಡಲು ಹೋಗಿ ಹಿಂದಿನಿಂದ ಅಪ್ಪಳಿಸಿದೆ. ನಿಯಂತ್ರಣ ಕಳೆದುಕೊಂಡ ಗೂಡ್ಸ್ ಆಟೋ ಬಸ್ ಗೆ ಅಪ್ಪಳಿಸಿದೆ. ಬಸ್ ನಲ್ಲಿದ್ದ ಪ್ರಯಾಣಿಕರು ಗಾಬರಿಯಾಗಿ ಕೂಗಿಕೊಂಡಿದ್ದಾರೆ.
ಇದೇ ಸಮಯದಲ್ಲಿ ಸಾಗರ ಕಡೆಗೆ ತೆರಳುತ್ತಿದ್ದ ಕಾರ್ ಗೆ ಲಾರಿ ತಗಲಿದೆ.
ಘಟನೆಯಿಂದ ಅರ್ಧ ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳಕ್ಕೆ ಕುಂಸಿ ಪೊಲೀಸರು ಧಾವಿಸಿ, ಪ್ರಕರಣ ದಾಖಲಿಸಿದ್ದಾರೆ.