ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿ ೬೬ರ ಉಚ್ಚಿಲದ ಹನಾಫಿ ಮಸೀದಿ ಬಳಿ ಸರಣಿ ಅಪಘಾತದಿಂದ ವಾಹನಗಳು ಜಖಂಗೊಂಡಿದ್ದು ಕೆಲ ಮಂದಿ ಗಾಯಗೊಂಡಿರುವ ಘಟನೆಯು ಗುರುವಾರ ರಾತ್ರಿ ನಡೆದಿದೆ.
ಸ್ಕಾರ್ಪಿಯೋ ವಾಹನ ಚಾಲಕನು ಅತೀವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ಉಡುಪಿಯತ್ತ ಸಾಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಎರ್ಮಾಳು ಬಳಿ ವಿರುದ್ಧ ದಿಕ್ಕು ಮತ್ತು ಡಿವೈಡರ್ ಬಳಿ ಎರಡು ಬೈಕ್ಗಳಿಗೆ ಡಿಕ್ಕಿ ಹೊಡೆದು, ನಿಲ್ಲಿಸದೆ ಉಡುಪಿಯತ್ತ ಅತಿವೇಗದಿಂದ ತೆರಳುತ್ತಿದ್ದ. ಉಚ್ಚಿಲ ಪೇಟೆಯನ್ನು ದಾಟಿದ ಬಳಿಕ ಹನಾಫಿ ಮಸೀದಿಯ ಬಳಿ ಎರ್ಟಿಗಾ ಕಾರು, ಬೈಕು ಹಾಗೂ ಮೀನಿನ ಲಾರಿಗೆ ಡಿಕ್ಕಿ ಹೊಡೆದಿದೆ.
ಸ್ಕಾರ್ಪಿಯೋ ಕಾರು ಗುದ್ದಿದ ರಭಸಕ್ಕೆ ಎರ್ಟಿಗಾ ಕಾರು ಹೆದ್ದಾರಿ ವಿಭಾಜಕವನ್ನು ಏರಿ ದಾಟಿ ಹೋಗಿದ್ದು, ಮಂಗಳೂರಿನತ್ತ ತೆರಳುವ ರಾ.ಹೆದ್ದಾರಿಯ ಪಥದತ್ತ ಮುಖ ಮಾಡಿ ನಿಂತಿದೆ. ಸ್ಕೂಟಿ ಸವಾರ ಸ್ಥಳೀಯ ಸೈಕಲ್ ಅಂಗಡಿ ಮಾಲಕ ಸಹಿತ ಕಾರಿನಲ್ಲಿದ್ದ ಕೆಲ ಮಂದಿ ಗಾಯಗೊಂಡಿದ್ದು ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಘಟನೆಯ ಸಂದರ್ಭ ರಾ.ಹೆದ್ದಾರಿಯಲ್ಲಿ ಕೆಲ ಕಾಲ ವಾಹನ ಸಂಚಾರ ವ್ಯತ್ಯಯಗೊಂಡಿತ್ತು. ಸ್ಥಳೀಯರು ಮತ್ತು ಪೋಲೀಸರು ಸುಗಮ ಸಂಚಾರಕ್ಕೆ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ
ಘಟನಾ ಸ್ಥಳಕ್ಕೆ ಕಾಪು ವೃತ್ತ ನಿರೀಕ್ಷಕ ಕೆಸಿ ಪೂವಯ್ಯ, ಕಾಪು ಪಿ.ಎಸ್ಸೈ ಶ್ರೀಶೈಲ ಮುರುಗೋಡ, ಪಡುಬಿದ್ರಿ ಪಿ.ಎಸ್ಸೈ ಪುರುಷೋತ್ತಮ್ ಮತ್ತು ಆರಕ್ಷಕ ಸಿಬ್ಬಂದಿಯವರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.