ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿಕೆಟ್ ರಹಿತವಾಗಿ ರೈಲಿನಲ್ಲಿ ಕೇರಳದಿಂದ ಉಡುಪಿಗೆ ಪ್ರಯಾಣಿಸಿದ ನಾಲ್ವರು ಜೈಲು ಸೇರಿದ ಘಟನೆ ನಡೆದಿದೆ.
ಕೇರಳ ಮೂಲಕ ಜುನೈದ್(24), ಸುಜಿತ್(23), ವಿಷ್ಣು(24), ಉನಿಸ್(24), ಮಿಸಾಬ್(24) ಅವರು ಅ.12ರಂದು ಮಂಗಳೂರಿನಿಂದ ಗೋವಾಕ್ಕೆಂದು ರೈಲು ಸಂಖ್ಯೆ 12620 ಮತ್ಸ್ಯಗಂಧ ಎಕ್ಸ್ ಪ್ರೆಸ್ನಲ್ಲಿ ಟಿಕೆಟ್ ರಹಿತವಾಗಿ ಪ್ರಯಾಣಿಸುತ್ತಿದ್ದರು.
ರೈಲು ಉಡುಪಿ ತಲುಪಿದಾಗ ಸಿಬಂದಿ ಟಿಕೆಟ್ ಕೇಳಿದರು. ಈ ವೇಳೆ ಈ ಐದೂ ಮಂದಿ ಉಡಾಫೆಯಿಂದ ಮಾತನಾಡಿದ್ದಾರೆ. ಈ ಬಗ್ಗೆ ಉಡುಪಿ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ನ ಸಬ್ ಇನ್ ಸ್ಪೆಕ್ಟರ್ ಸುಧೀರ್ ಶೆಟ್ಟಿ ಹಾಗೂ ಸಿಬಂದಿ ಝೀನಾ ಪಿಂಟೋ ಅವರು ಪ್ರಕರಣ ದಾಖಲಿಸಿದ್ದರು.
ಉಡುಪಿ ಜೆಎಂಎಫ್ಸಿ ನ್ಯಾಯಾಲಯವು ಆರೋಪಿಗಳಿಗೆ ತಲಾ 1,100 ರೂ.ದಂಡ ಹಾಗೂ 30 ದಿನಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. 30 ದಿನಗಳೊಳಗೆ ದಂಡದ ಮೊತ್ತ ಪಾವತಿಸದಿದ್ದರೆ ಮತ್ತೆ 2 ತಿಂಗಳ ಕಾಲ ಜೈಲುಶಿಕ್ಷೆ ವಿಸ್ತರಿಸಲಾಗುವುದು ಎಂದು ನ್ಯಾಯಾಲಯ ಆದೇಶಿಸಿದೆ.