ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ಎನ್ಡಿಎಗೆ ಹಿನ್ನಡೆಯುಂಟು ಮಾಡಲು ಬಿಜೆಪಿಯೇತರ ಪಕ್ಷಗಳ ಸಭೆ ಕರೆದಿದ್ದ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಹಿನ್ನಡೆಯುಂಟಾಗಿದೆ.
ಪ್ರಮುಖ ಪಕ್ಷಗಳಾದ ಆಮ್ ಆದ್ಮಿ ಪಾರ್ಟಿ ಮತ್ತು ತೆಲಂಗಾಣ ರಾಷ್ಟ್ರ ಸಮಿತಿಗಳು ಸಭೆಯಿಂದ ದೂರವುಳಿಯುವುದಾಗಿ ಹೇಳಿವೆ.
ಸಭೆಯಲ್ಲಿ ಕಾಂಗ್ರೆಸ್ ಪಕ್ಷವೂ ಭಾಗವಹಿಸುತ್ತಿದೆ. ನಾವು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜೊತೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂಬ ಕಾರಣ ನೀಡಿ ಟಿಆರ್ಎಸ್ ಸಭೆಯ ಗೈರಿನ ಕುರಿತು ಸ್ಪಷ್ಟನೆ ನೀಡಿದೆ. ಇನ್ನು ಆಮ್ ಆದ್ಮಿ ಪಕ್ಷವು ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿ ಆಯ್ಕೆಯಾದ ನಂತರ ಪ್ರತಿಕ್ರಿಯಿಸುವುದಾಗಿ ಹೇಳಿದೆ.
ಮಂಗಳವಾರ ದೆಹಲಿಗೆ ಬಂದಿಳಿದ ಬ್ಯಾನರ್ಜಿ ಎನ್ಸಿಪಿ ನಾಯಕ ಶರದ್ ಪವಾರ್ ಅವರ ಬಳಿ ರಾಷ್ಟ್ರಪತಿ ಚುನಾವಣೆಗೆ ಸ್ಫರ್ಧಿಸುವಂತೆ ವಿನಂತಿಸಿದ್ದರು ಆದರೆ ಪವಾರ್ ಈ ಬೇಡಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸಿದ್ದರು ಎಂದು ವರದಿಯಾಗಿವೆ.
ಪ್ರಸ್ತುತ ದೆಹಲಿಯಲ್ಲಿ 22 ಪಕ್ಷಗಳ ಸಭೆ ಆಯೋಜನೆಯಾಗಿದ್ದು ಅವುಗಳಲ್ಲಿ ಪ್ರಮುಖ ಎರಡು ಪಕ್ಷಗಳು ಸಭೆಯಿಂದ ಅಂತರ ಕಾಯ್ದುಕೊಂಡಿರುವುದರಿಂದ ಮಮತಾ ಬ್ಯಾನರ್ಜಿ ಪ್ರಯತ್ನಕ್ಕೆ ಹಿನ್ನಡೆಯುಂಟಾಗಿದೆ.