ಹೊಸದಿಗಂತ ಡಿಜಿಟಲ್ ಡೆಸ್ಕ್:
2022ರ ಬಾಂಬ್ ಸ್ಫೋಟ ಪ್ರಕರಣದ ತನಿಖೆಗೆಂದು ಹೋದ ಎನ್ಐಎ ಅಧಿಕಾರಿಗಳ ಮೇಲೆಯೇ ಪಶ್ಚಿಮ ಬಂಗಾಳದಲ್ಲಿ ಗ್ರಾಮಸ್ಥರು ಶನಿವಾರ ದಾಳಿ ಮಾಡಿದ್ದರು.
ಇದೀಗ ಪಶ್ಚಿಮ ಬಂಗಾಳ ಪೊಲೀಸರು ಅಧಿಕಾರಿಗಳ ಮೇಲೆ ದಾಳಿ ಮಾಡಿ ಅವರ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಎನ್ಐಎ ಅಧಿಕಾರಿಗಳ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿ ಎಫ್ಐಆರ್ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ಪುರ್ಬಾ ಮೇದಿನಿಪುರ ಜಿಲ್ಲೆಯ ಭೂಪತಿನಗರ ಪ್ರದೇಶಕ್ಕೆ ಶನಿವಾರ ಎನ್ಐಎ ಅಧಿಕಾರಿಗಳು ಬಾಂಬ್ ಸ್ಫೋಟ ಪ್ರಕರಣದ ತನಿಖೆಗೆಂದು ಆಗಮಿಸಿದ ವೇಳೆ ಗ್ರಾಮಸ್ಥರು ಅಧಿಕಾರಿಗಳ ಮೇಲೆಯೇ ದಾಳಿ ನಡೆಸಿ ಕಲ್ಲು ತೂರಾಟ ನಡೆಸಿದ್ದರು. ನಂತರ ಬಾಲಚರಣ್ ಮೈತ್ರಿ ಮತ್ತು ಮನೋಬ್ರತಾ ಜಾನಾ ಅವರನ್ನು ಬಂಧಿಸಲಾಯಿತು. ಅವರ ಕುಟುಂಬ ಸದಸ್ಯರ ದೂರಿನ ಮೇರೆಗೆ ಎನ್ಐಎ ಅಧಿಕಾರಿಗಳ ವಿರುದ್ಧ ಲೈಂಗಿಕ ದೌರ್ಜನ್ಯ ಸೇರಿದಂತೆ ಇತರೆ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಲಾಗಿದೆ.
ಟಿಎಂಸಿ ಸದಸ್ಯ ಮನಬ್ರೊಟೊ ಜಾನಾ ಸೇರಿದಂತೆ ಬಂಧಿತ ವ್ಯಕ್ತಿಗಳ ಕುಟುಂಬ ಸದಸ್ಯರು ಹಲವಾರು ದೂರುಗಳನ್ನು ಸಲ್ಲಿಸಿದ ನಂತರ ಈ ಹಠಾತ್ ಕ್ರಮ ಕೈಗೊಳ್ಳಲಾಗಿದೆ.
2022ರ ಡಿಸೆಂಬರ್ 3 ರಂದು ಭೂಪತಿನಗರದ ಗುಡಿಸಲು ಮನೆಯೊಂದರಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಒಟ್ಟು ಮೂವರು ಬಲಿಯಾಗಿದ್ದರು. ಈ ಪ್ರಕರಣವನ್ನು ನಂತರ ಎನ್ಐಎಗೆ ಹಸ್ತಾಂತರಿಸಲಾಗಿತ್ತು. ಈ ಪ್ರಕರಣದ ವಿಚಾರಣೆಗೆ ಆಗಮಿಸಿದ ಎನ್ಐಎ ಅಧಿಕಾರಿಗಳ ಮೇಲೆ ದಾಳಿ ನಡೆದಿದ್ದು, ಇದು ಜನವರಿ 5 ರಂದು ನಡೆದ ಘಟನೆಯನ್ನು ಮತ್ತೆ ನೆನಪು ಮಾಡುವಂತೆ ಮಾಡಿದೆ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಮತಾ ಬ್ಯಾನರ್ಜಿ ಎನ್ಐಎ ಸಿಬ್ಬಂದಿ ಭೂಪತಿನಗರದ ನಿವಾಸಿಗಳ ಮೇಲೆ ಹಲ್ಲೆ ನಡೆಸಿದರು. ಅದಕ್ಕೆ ಮಹಿಳೆಯರು ಅವರ ವಾಹನ ತಡೆದು ಪ್ರತಿಭಟಿಸಿದರು. ಮಹಿಳೆಯರ ಮೇಲೆ ದಾಳಿ ನಡೆದರೆ ಸುಮ್ಮನೆ ಕೂರುತ್ತಾರಾ? ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ’ ಎಂದು ಕಿಡಿಕಾರಿದ್ದಾರೆ.