ಹೊಸ ದಿಗಂತ ವರದಿ,ಶಿವಮೊಗ್ಗ
ಶಬರಿಮಲೈ ದೇವಾಲಯ ದಲ್ಲಿ ಆಗುತ್ತಿರುವ ಅವ್ಯವಸ್ಥೆ ಬಗ್ಗೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕೇರಳ ಸರ್ಕಾರ ಉದ್ದೇಶ ಪೂರ್ವಕವಾಗಿ ಇದನ್ನು ಮಾಡುತ್ತಿದ್ದರೆ ಕೇಂದ್ರವು ದೇವಸ್ಥಾನವನ್ನು ವಶಕ್ಕೆ ಪಡೆಯಬೇಕು ಎಂದರು.
ಇದೊಂದು ವ್ಯವಸ್ಥಿತವಾಗಿ ಹಿಂದೂ ವಿರೋಧಿ ನಡೆ. ಕಳೆದ ವರ್ಷ ಶಬರಿಮಲೈನಲ್ಲಿ ಮುನ್ನೂರು ಹತ್ತು ಕೋಟಿ ರುಪಾಯಿ ಜಮಾ ಆಗಿದೆ. ಆದರೆ ಶೌಚಾಲಯ ಇಲ್ಲ, ಕುಡಿಯುವ ನೀರು ಹಾಗೂ ಮೂಲಭೂತ ಸೌಕರ್ಯ ಇಲ್ಲ. ಬೇಕಂತಲೇ ಕೇರಳ ಸರ್ಕಾರ ದುಷ್ಕೃತ್ಯ ಮಾಡುತ್ತಿದೆ ಎಂದರು.
ಈ ವಿಚಾರವು ಕೇರಳ ಕೋರ್ಟ್ ಗಮನಕ್ಕೆ ಹೋಗಿ, ಅಲ್ಲಿನ ಎಡಿಜಿಪಿಗೆ ಸೂಚನೆ ಕೊಟ್ಟರೂ ಮಾಡಿಲ್ಲ. ಬದರಿನಾಥ, ಕೇದಾರ, ತಿರುಪತಿಗೂ ಲಕ್ಷಾಂತರ ಭಕ್ತರು ಹೋಗುತ್ತಾರೆ. ತಿರುಪತಿ ಆನ್ಲೈನ್ ಬುಕ್ ಮಾಡ್ತಾರೆ. ಅವಧಿ ಮುಗಿದ ನಂತರ ಕ್ಲೋಸ್ ಮಾಡ್ತಾರೆ. ಆದರೆ ಇಲ್ಲಿ ಆನ್ ಲೈನ್ ಗೋಲ್ ಮಾಲ್ ನಡೆಯುತ್ತಿದೆ ಎಂದಿದ್ದಾರೆ.
ಕರ್ನಾಟಕದ ಅಯ್ಯಪ್ಪ ಭಕ್ತರ ಸಂಘಟನೆ ಮಾಡಿ ಆಂದೋಲನ ರೂಪದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದವರು ಎಚ್ಚರಿಸಿದ್ದಾರೆ.