ಹೊಸದಿಗಂತ ಡಿಜಿಟಲ್ ಡೆಸ್ಕ್:
ಜವಾನ್ ಚಿತ್ರದ ಯಶಸ್ಸಿನ ಬಳಿಕ ಬಾಲಿವುಡ್ ನಟ ಶಾರುಖ್ ಖಾನ್ಗೆ ಜೀವ ಬೆದರಿಕೆ ಹಿನ್ನೆಲೆ ಭದ್ರತೆ ಹೆಚ್ಚಿಸಲಾಗಿದೆ. ಶಾರುಖ್ ಖಾನ್ ಇತ್ತೀಚಿನ ಚಿತ್ರಗಳಾದ ಪಠಾಣ್ ಮತ್ತು ಜವಾನ್ ಯಶಸ್ಸಿನ ಬಳಿಕ ಶಾರುಖ್ರನ್ನು ಕೊಲೆ ಮಾಡುವುದಾಗಿ ಬೆದರಿಕೆಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ರಾಜ್ಯ ಸರ್ಕಾರ ಶಾರುಖ್ ಅವರ ಭದ್ರತಾ ಮಟ್ಟವನ್ನು ವೈ ಪ್ಲಸ್ ವರ್ಗಕ್ಕೆ ಮೇಲ್ದರ್ಜೆಗೇರಿಸಿದೆ. ರಾಜ್ಯ ಸರ್ಕಾರದ ಆದೇಶದಂತೆ ವಿಐಪಿ ಭದ್ರತಾ ಐಜಿ ಶಾರುಖ್ ಖಾನ್ ಭದ್ರತೆ ಹೆಚ್ಚಿಸಿದ್ದಾರೆ.
ಭದ್ರತಾ ಸೇವೆಗಳ ಅಡಿಯಲ್ಲಿ ಸರ್ಕಾರ ಶುಲ್ಕ ವಿಧಿಸುತ್ತದೆ. ಅದಕ್ಕೆ ಸಂಬಂಧಿಸಿದ ಭದ್ರತಾ ವೆಚ್ಚವನ್ನು ಶಾರುಖ್ ರಾಜ್ಯ ಸರ್ಕಾರಕ್ಕೆ ಭರಿಸಲಿದ್ದಾರೆ. ಶಾರುಖ್ ಅವರ ನಿವಾಸದಲ್ಲಿ ಐವರು ಶಸ್ತ್ರಸಜ್ಜಿತ ಗಾರ್ಡ್ಗಳನ್ನು ಹೊರತುಪಡಿಸಿ, ಆರು ವೈಯಕ್ತಿಕ ಭದ್ರತಾ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಅವರು ಮೂರು ಪಾಳಿಯಲ್ಲಿ 24 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ.
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಿಂದ ಬೆದರಿಕೆಯಿಂದಾಗಿ ಬಾಲಿವುಡ್ ನಟ ಸಲ್ಮಾನ್ ಖಾನ್ ಗೂ ವೈ ಪ್ಲಸ್ ಭದ್ರತೆ ನೀಡಿತ್ತು. ಅಟ್ಲಿ ನಿರ್ದೇಶನದ ಜವಾನ್, ಸೆಪ್ಟೆಂಬರ್ 7 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಯಿತು, ವಿಶ್ವದಾದ್ಯಂತ 1100 ಕೋಟಿ ಗಳಿಸಿದ ಮೊದಲ ಹಿಂದಿ ಚಿತ್ರ ಎಂಬ ಇತಿಹಾಸವನ್ನು ಸೃಷ್ಟಿಸಿದೆ.