August 17, 2026
Monday, August 17, 2026
spot_img

ಸಂಸತ್ತಿನಲ್ಲಿ ಪ್ರಧಾನಿ ಭೇಟಿಯಾದ ಶರದ್ ಪವಾರ್: ಮಹಾರಾಷ್ಟ್ರ ರಾಜಕಾರಣದಲ್ಲಿ ಹೊಸ ತಿರುವು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರೀಯ ಹಾಗೂ ಮಹಾರಾಷ್ಟ್ರ ರಾಜಕೀಯ ಅಂಗಳದಲ್ಲಿ ಮತ್ತೊಂದು ದೊಡ್ಡ ಬದಲಾವಣೆಯ ಮುನ್ಸೂಚನೆ ಸಿಗುತ್ತಿದೆ. ಎನ್‌ಸಿಪಿ (ಶರದ್ ಪವಾರ್ ಬಣ) ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಪಕ್ಷದ ಅಧಿನಾಯಕ ಶರದ್ ಪವಾರ್ ಹಾಗೂ ಸಂಸದೆ ಸುಪ್ರಿಯಾ ಸುಳೆ ಅವರು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ.

ಸಂಸತ್ತಿನ ಗದ್ದಲದ ನಡುವೆ ರಹಸ್ಯ ಭೇಟಿ

ಸಂಸತ್ತಿನ ಕಲಾಪಗಳ ವೇಳೆ ನೀಟ್ ಅಕ್ರಮ ಸೇರಿದಂತೆ ಹಲವು ಪ್ರಮುಖ ವಿಚಾರಗಳನ್ನು ಮುಂದಿಟ್ಟುಕೊಂಡು ವಿಪಕ್ಷಗಳು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿರುವ ಸಮಯದಲ್ಲೇ ಈ ದಿಢೀರ್ ಭೇಟಿ ಸಂಭವಿಸಿದೆ. ಪ್ರಧಾನಿ ಕಚೇರಿಯಲ್ಲಿ ನಡೆದ ಈ ಉನ್ನತ ಮಟ್ಟದ ಭೇಟಿಯಲ್ಲಿ ನಾಯಕರಿಬ್ಬರೂ ಅತ್ಯಂತ ಹರ್ಷಚಿತ್ತರಾಗಿ, ನಗುಮುಖದಿಂದ ಚರ್ಚಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ವೈರಲ್ ಆಗಿವೆ.

ಮೈತ್ರಿ ವದಂತಿಗೆ ಮತ್ತೆ ಪುಷ್ಟಿ

ಈ ಮಹತ್ವದ ಭೇಟಿಯು ಇಡೀ ದೇಶದ ರಾಜಕೀಯ ವಲಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ. ವಿಪಕ್ಷಗಳ ಒಕ್ಕೂಟದ ಪ್ರಮುಖ ರೂವಾರಿಯಾಗಿದ್ದ ಪವಾರ್ ಅವರ ಈ ನಡೆ, ಎನ್‌ಸಿಪಿ ಹಾಗೂ ಎನ್‌ಡಿಎ ನಡುವಿನ ಮೈತ್ರಿ ಅಥವಾ ವಿಲೀನದ ವದಂತಿಗಳಿಗೆ ಮತ್ತಷ್ಟು ಬಲ ತಂದಿದೆ. ಭವಿಷ್ಯದ ರಾಜಕೀಯ ಹೆಜ್ಜೆಗಳ ಕುರಿತು ದೆಹಲಿ ಪಡಸಾಲೆಯಲ್ಲಿ ತೀವ್ರ ಕುತೂಹಲ ಮೂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !