ಹೊಸದಿಗಂತ ವರದಿ ಶಿವಮೊಗ್ಗ:
ನಗರದ ಪೊಲೀಸರು ಕೊನೆಗೂ ತಮ್ಮ ಬಂದೂಕಿಗೆ ಕೆಲಸ ಕೊಟ್ಟಿದ್ದಾರೆ. ತಮ್ಮ ಮೇಲೆ ದಾಳಿ ನಡೆಸಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಸೋಮವಾರ ನಗರದ ಗಾಂಧಿಬಜಾರ್ನಲ್ಲಿ ಮನೆ ಕಡೆಗೆ ತೆರಳುತ್ತಿದ್ದ ಪ್ರೇಮ್ಕುಮಾರ್ ಸಿಂಗ್ಗೆ ಚಾಕುವಿನಿಂದ ಇರಿಯಲಾಗಿತ್ತು. ಪ್ರಕರಣದ ಇಬ್ಬರು ಆರೋಪಿಗಳನ್ನು ಕೆಲವೇ ಗಂಟೆಗಳಲ್ಲಿ ಪೊಲೀಸರು ಬಂಧಿಸಿದ್ದರು. ಘಟನೆಯ ಪ್ರಮುಖ ಆರೋಪಿ, ಮಾರ್ನಮಿಬೈಲ್ ನಿವಾಸಿ ಮೊಹಮದ್ ಜಬೀ ಅಲಿಯಾಸ್ ಚರ್ಬಿ(30) ಬಂಧಿಸಲು ಮಂಗಳವಾರ ಬೆಳಗ್ಗಿನ ಜಾವ ಪೊಲೀಸರು ಸುತ್ತುವರೆದಿದ್ದರು.
ಎನ್ಟಿ ರಸ್ತೆಯ ಫಲಕ್ ಪ್ಯಾಲೇಸ್ ಬಳಿ ಈತನನ್ನು ಸುತ್ತುವರೆದಾಗ ಪೊಲೀಸರ ಮೇಲೆ ಚಾಕುವಿನಿಂದ ಇರಿಯಲು ಯತ್ನಿಸಿದ್ದಾನೆ. ತಕ್ಷಣ ವಿನೋಬನಗರ ಠಾಣೆ ಪಿಎಸ್ಐ ಮಂಜುನಾಥ ಕುರಿ ತಮ್ಮ ಬಳಿ ಇದ್ದ ಪಿಸ್ತೂಲಿನಿಂದ ಚರ್ಬಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಬಳಿಕ ಆತನನ್ನು ಬಂಧಿಸಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಪಿಎಸ್ಐ ಕೂಡ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.