ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವದಾದ್ಯಂತ ಕಾಂತಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಬಾಕ್ಸ್ ಆಫೀಸ್ ನಲ್ಲಿ ಬಾಚಿ ಬಾಚಿ ಹಣ ಸಂಗ್ರಹಿಸುತ್ತಿದೆ. ಇನ್ನು ಕೂಡ ತನ್ನ ಓಟವನ್ನು ನಿಲ್ಲಿಸಿಲ್ಲ.”
ಪರಭಾಷೆಯಲ್ಲಿ ಕಾಂತಾರ ಸಿನಿಮಾ ನಟರು, ನಟಿಯರು, ನಿರ್ದೇಶಕರು, ನಿರ್ಮಾಪಕರು ಹಾಗೂ ತಂತ್ರಜ್ಞರು ವೀಕ್ಷಿಸಿ ಪ್ರಶಂಸೆಯ ಸುರಿಮಳೆಗೈದರು.
ಇನ್ನು ಕಾಂತಾರ ಪ್ರೀಮಿಯರ್ ಪ್ರದರ್ಶನವನ್ನು ರಾಜ್ ಕುಟುಂಬದ ಯುವರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಗೂ ವಿನಯ್ ರಾಜ್ ಕುಮಾರ್ ವೀಕ್ಷಿಸಿದ್ದರು. ಆದರೆ ಶಿವರಾಜ್ ಕುಮಾರ್ ಮಾತ್ರ ಆಗಮಿಸಿರಲಿಲ್ಲ ಹಾಗೂ ಚಿತ್ರವನ್ನು ವೀಕ್ಷಿಸಿರಲಿಲ್ಲ. ಇದೀಗ ಸ್ವತಃ ಶಿವಣ್ಣ ಅವರೇ ಕಾಂತಾರ ಚಿತ್ರದ ಕುರಿತು ಮಾತನಾಡಿದ್ದಾರೆ.
ಪವನ್ ಒಡೆಯರ್ ನಿರ್ದೇಶನದ ಹಾಗೂ ಇಶಾನ್ ಮತ್ತು ಆಶಿಕಾ ರಂಗನಾಥ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ರೇಮೊ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಿವರಾಜ್ ಕುಮಾರ್, ಕಾಂತಾರ ಚಿತ್ರವನ್ನು ಉಲ್ಲೇಖಿಸಿದರು. ರೇಮೊ ಚಿತ್ರದ ಟ್ರೈಲರ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಶಿವಣ್ಣ ಇತ್ತೀಚೆಗಿನ ಕನ್ನಡ ಚಿತ್ರಗಳು ಅದ್ಭುತವಾಗಿ ಮೂಡಿ ಬರುತ್ತಿವೆ, ಅದರಲ್ಲಿಯೂ ಕಾಂತಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ ಎಂದರು.
ಕಾಂತಾರ ಚಿತ್ರದ ಟ್ರೈಲರ್ ವೀಕ್ಷಿಸಿದ ನಂತರ ರಿಷಬ್ ಶೆಟ್ಟಿಗೆ ಕಾಲ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದೆ ಹಾಗೂ ವಿಶೇಷವಾಗಿ ಸಿಂಗಾರ ಸಿರಿಯೇ ಹಾಡು ನನ್ನನ್ನು ತುಂಬಾ ಕಾಡುತ್ತಿದೆ ಎಂದು ರಿಷಬ್ ಶೆಟ್ಟಿ ಬಳಿ ಹೇಳಿದ್ದೆ ಎಂದರು. ಚಿತ್ರೀಕರಣದಲ್ಲಿ ಬ್ಯುಸಿ ಇರುವ ಕಾರಣ ಕಾಂತಾರ ಚಿತ್ರವನ್ನು ವೀಕ್ಷಿಸಲಾಗಲಿಲ್ಲ ಆದರೆ ಇನ್ನೆರಡು ದಿನಗಳಲ್ಲಿ ಕಾಂತಾರ ಚಿತ್ರವನ್ನು ನೋಡುತ್ತೇನೆ ಎಂದು ಶಿವಣ್ಣ ಹೇಳಿದರು.