ಹೊಸದಿಗಂತ ವರದಿ, ಮೈಸೂರು:
ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಕೊನೆ ದಿನ ನಡೆಯುವ ಜಂಬೂಸವಾರಿಯಲ್ಲಿ 15 ಬಾರಿ ಚಿನ್ನದ ಅಂಬಾರಿ ಹೊತ್ತಿದ್ದ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದ `ಬಲರಾಮ’ ಆನೆ (67) ಭಾನುವಾರ ನಿಧನವಾಯಿತು.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಭೀಮನಕಟ್ಟೆ ಆನೆ ಶಿಬಿರದಲ್ಲಿರುವ ಬಲರಾಮ ಕಳೆದ 7 ದಿನಗಳಿಂದ ಆನೆ ಆಹಾರ ಸೇವನೆಯನ್ನು ತ್ಯಜಿಸಿರುವ ಹಿನ್ನೆಲೆಯಲ್ಲಿ ಆತನ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದು, ಇದೀಗ ಅರಣ್ಯ ಇಲಾಖೆಯ ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡುತ್ತಿದ್ದರು.
ಪಶುವೈದ್ಯರು ಹಾಗೂ ತಜ್ಞರ ತಂಡವು ಇದೀಗ ಆನೆಗೆ ಎಂಡೋಸ್ಕೋಪಿ ಮಾಡಲಾಗಿತ್ತು.
ಆನೆಯ ಗಂಟಲಿನಲ್ಲಿ ಹುಣ್ಣಾಗಿರುವ ಕಾರಣ ಏನನ್ನೂ ನುಂಗಲು ಸಾಧ್ಯವಾಗದೆ, ಆಹಾರ ತ್ಯಜಿಸಿರುವುದು ಕಂಡು ಬಂದಿತ್ತು.
ಆಹಾರ ಸೇವನೆ ಮಾಡದೆ ನಿತ್ರಾಣಗೊಂಡಿದ್ದು, ಬಲರಾಮನಿಗೆ ಪಶುವೈದ್ಯರು ದ್ರವ ಪದಾರ್ಥಗಳನ್ನು ಸೇವನೆಗೆ ನೀಡಲಾಗುತ್ತಿತ್ತು. ಆದರೆ ತಜ್ಞ ವೈದ್ಯರು ನೀಡುತ್ತಿದ್ದ ಚಿಕಿತ್ಸೆ ಫಲಕಾರಿಯಾಗದೆ ಬಲರಾಮ ಮೃತಪಟ್ಟಿದ್ದಾನೆ ಎಂದು ಹುಣಸೂರು ವಲಯದ ಡಿಸಿಎಫ್ ಹರ್ಷಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಬಲರಾಮನ ಅಂತ್ಯಕ್ರಿಯೆ ಸೋಮವಾರ ನಡೆಯಲಿದೆ.
1958ರಲ್ಲಿ ಜನಸಿದ ಬಲರಾಮ ಅತ್ಯಂತ ಹಳೆಯ ದಸರಾ ಆನೆ. 15 ವರ್ಷಗಳಿಂದ ಚಿನ್ನದ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತು ನಿರ್ವಹಿಸುವ ಮೂಲಕ ಎಲ್ಲರ ಗಮನ ಸೆಳೆದು ಮೆಚ್ಚುಗೆಗೆ ಪಾತ್ರವಾಗಿದ್ದ.