ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಕೊಡಗು ಗಡಿಭಾಗದಲ್ಲಿ ಭೂಮಿ ನಡುಗಿ ಆತಂಕಹುಟ್ಟಿಸಿದ ವಿದ್ಯಮಾನ ಇನ್ನೂ ಹಸಿಯಾಗಿ ಇರುವಂತೆಯೇ ಮಂಗಳೂರು ನಗರದ ಮೇರಿಹಿಲ್ ಪರಿಸರದಲ್ಲಿ ಬುಧವಾರ ಭೂಮಿ ನಡುಗಿದ ಅನುಭವವಾಗಿದೆ.
ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು, ಬುಧವಾರ ಬೆಳಗ್ಗೆ 10ರಿಂದ 10.30ರ ವೇಳೆಗೆ ಭೂ ಕಂಪಿಸಿದ ಅನುಭವವಾಗಿದೆ ಎಂದಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಈ ಭಾಗದ ಶಾಲೆಯ ವಿದ್ಯಾರ್ಥಿಗಳನ್ನು ಕೊಠಡಿಯಿಂದ ಹೊರಕ್ಕೆ ಕಳುಹಿಸಲಾಗಿತ್ತು. ಬಳಿಕ ಎಂದಿನಂತೆ ತರಗತಿಗಳು ಆರಂಭವಾಗಿದೆ. ಇದಲ್ಲದೆ ಬಹುಮಹಡಿಯ ಕಟ್ಟಡಗಳಲ್ಲೂ ಲಘು ಭೂಕಂಪನದ ಅನುಭವವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಈ ಬಗ್ಗೆ ಆಡಳಿತ, ಇಲಾಖೆ ಮಾತ್ರ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.