ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುಣೆಯ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೃತ್ಯಕ್ಕೂ ಮುನ್ನ ಆರೋಪಿಗಳಾದ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಹಲವು ಬಾರಿ ಕೊಲೆಗಾಗಿ ‘ರಿಹರ್ಸಲ್’ ನಡೆಸಿದ್ದರೇ? ಹೌದು ಎನ್ನುತ್ತಿದೆ ಪೊಲೀಸ್ ಮೂಲಗಳು.
ದೇಶವನ್ನೇ ಬೆಚ್ಚಿಬೀಳಿಸಿರುವ ಈ ಘಟನೆಯ ತನಿಖೆ ಇನ್ನಷ್ಟು ಚುರುಕುಗೊಂಡಿದ್ದು, ತನಿಖೆಯಲ್ಲಿ ಒಂದೊಂದೇ ಆಘಾತಕಾರಿ ಮಾಹಿತಿ ಹೊರಬರುತ್ತಿದೆ. ಕೇತನ್ ಅಗರ್ವಾಲ್ ಅವರನ್ನು ಕೊಲ್ಲುವ ಯೋಜನೆ ಏಕಾಏಕಿ ರೂಪುಗೊಂಡದ್ದಲ್ಲ. ಲೋಹಗಢ ಕೋಟೆ ಪ್ರದೇಶಕ್ಕೆ ಹಲವು ಬಾರಿ ಭೇಟಿ ನೀಡಿದ್ದ ಆರೋಪಿಗಳು, ಕಣಿವೆಗೆ ತಳ್ಳುವ ಕೃತ್ಯವನ್ನು ಹೇಗೆ ನಡೆಸಬೇಕು ಎಂಬುದರ ಕುರಿತು ಪೂರ್ವಾಭ್ಯಾಸ ನಡೆಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಇದಷ್ಟೇ ಅಲ್ಲ, ಕೊಲೆಯ ವಿವಿಧ ವಿಧಾನಗಳ ಬಗ್ಗೆ ಆರೋಪಿಗಳು ಇಂಟರ್ನೆಟ್ನಲ್ಲಿ ಮಾಹಿತಿ ಹುಡುಕಿದ್ದರು ಎನ್ನುವ ಅಂಶವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕೊನೆಗೆ ಕೃತ್ಯವನ್ನು ಅಪಘಾತದಂತೆ ಬಿಂಬಿಸುವ ಉದ್ದೇಶದಿಂದ ಲೋಹಗಢ ಕೋಟೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಇದನ್ನೂ ಓದಿ:
ಪೊಲೀಸರ ಮಾಹಿತಿ ಪ್ರಕಾರ, ಘಟನೆ ನಡೆದ ದಿನ ಸಿಯಾ ಗೋಯಲ್ ಸಂಕೇತ ನೀಡಿದ ಬಳಿಕ ಚೇತನ್ ಚೌಧರಿ ಕೇತನ್ ಅವರನ್ನು ಕಣಿವೆಗೆ ತಳ್ಳಿದ್ದಾನೆ ಎನ್ನಲಾಗಿದೆ. ಈ ಆರೋಪಗಳನ್ನು ಪರಿಶೀಲಿಸಲು ತನಿಖಾ ತಂಡ ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ಘಟನೆಯ ಮರುಸೃಷ್ಟಿ ನಡೆಸಿದೆ. ಇದಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದ ಡಿಜಿಟಲ್ ಸಾಕ್ಷ್ಯಗಳನ್ನು ಅಳಿಸಲು ಆರೋಪಿಗಳು ಪ್ರಯತ್ನಿಸಿದ್ದಾರೆಯೇ ಎಂಬ ದಿಕ್ಕಿನಲ್ಲೂ ತನಿಖೆ ನಡೆಯುತ್ತಿದೆ.
ಮೊಬೈಲ್ಗಳಲ್ಲಿನ ಅಳಿಸಲಾದ ಚಾಟ್ಗಳು ಹಾಗೂ ಇತರೆ ಮಾಹಿತಿಯನ್ನು ಮರುಪಡೆಯಲು ಫೊರೆನ್ಸಿಕ್ ಪರೀಕ್ಷೆ ನಡೆಸಲಾಗುತ್ತಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಪೊಲೀಸರ ಆರೋಪಗಳ ಕುರಿತು ನ್ಯಾಯಾಲಯದ ವಿಚಾರಣೆ ಬಳಿಕವೇ ಅಂತಿಮ ಸತ್ಯ ಹೊರಬರಬೇಕಿದೆ.



