ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಸಂಚಲನ ಮೂಡಿಸಿರುವ ಶ್ರದ್ಧಾ ವಿಕಾಸ್ ವಾಲ್ಕರ್ ಹತ್ಯೆ ಪ್ರಕರಣದಲ್ಲಿ ಕ್ಷಣ ಕ್ಷಣಕ್ಕೂ ಹೊಸ ಆಘಾತಕಾರಿ ಮಾಹಿತಿ ಬಿಚ್ಚಿಕೊಳ್ಳುತ್ತಿದೆ.
ಕೊಲೆಯಾಗುವ ಮುನ್ನ ‘ನನ್ನನ್ನು ಕ್ಷಮಿಸು, ಅಫ್ತಾಬ್ ಸಾಯಿಸಬಹುದು…’ ಎಂದು ಶ್ರದ್ಧಾ ವಾಟ್ಸ್ಆಪ್ ಮೂಲಕ ಸ್ನೇಹಿತನಿಗೆ ಸಂದೇಶವೊಂದನ್ನು ಕಳುಹಿಸಿರುವುದು ಈಗ ಬಹಿರಂಗಗೊಂಡಿದೆ.
ಆಕೆಯ ಸ್ನೇಹಿತ ಲಕ್ಷ್ಮಣ್ ನಾಡಾರ್ ಈ ಬಗ್ಗೆ ಆಂಗ್ಲ ಪತ್ರಿಕೆಯೊಂದರ ಜೊತೆ ಮಾಹಿತಿ ಹಂಚಿಕೊಂಡಿದ್ದು, ಶ್ರದ್ಧಾ ಒಂದು ಬಾರಿ ವಾಟ್ಸ್ಯಾಪ್ನಲ್ಲಿ ನನಗೆ ಸಂದೇಶ ಕಳುಹಿಸಿದ್ದಳು. ಆ ಮನೆಯಿಂದ ಆಕೆಯನ್ನು ರಕ್ಷಿಸಬೇಕು ಎಂದು ಕೋರಿದ್ದಳು. ಆಗ ನನ್ನ ಮಿತ್ರರೊಂದಿಗೆ ಅಲ್ಲಿಗೆ ತೆರಳಿ ಆಕೆಯನ್ನು ರಕ್ಷಿಸಿದ್ದೆವು. ಒಂದು ವೇಳೆ ಆ ರಾತ್ರಿ ಅಲ್ಲೇ ಇದ್ದಿದ್ದರೆ ಅಫ್ತಾಬ್ ಆಕೆಯನ್ನು ಸಾಯಿಸುತ್ತಿದ್ದ ಎಂದು ನಾಡಾರ್ ತಿಳಿಸಿದ್ದಾರೆ.
ಶ್ರದ್ಧಾಗೆ ಅಫ್ತಾಬ್ ಮೇಲಿದ್ದ ಪ್ರೀತಿಯಿಂದಾಗಿ ಈ ವಿಷಯದ ಬಗ್ಗೆ ತಾನು ಪೊಲೀಸರಿಗೆ ದೂರು ನೀಡಿರಲಿಲ್ಲ. ಆದರೆ, ಕೆಲ ದಿನಗಳಿಂದ ಶ್ರದ್ಧಾಳಿಂದ ಯಾವುದೇ ಸಂದೇಶ ಮತ್ತು ಫೋನ್ ಕರೆ ಬರದಿದ್ದರಿಂದ ಆಕೆಯ ಸಹೋದರನಿಗೆ ವಿಷಯ ತಿಳಿಸಿದ್ದಾಗಿ ನಾಡಾರ್ ಮಾಹಿತಿ ನೀಡಿದ್ದಾರೆ.