ಶ್ರೀಕೃಷ್ಣ ಜನ್ಮಾಷ್ಠಮಿ, ಪೊಡವಿಗೊಡೆಯನಿಗೆ ಗಜವಾಹನ ಸೇವೆ

ಹೊಸದಿಗಂತ ವರದಿ ಬಳ್ಳಾರಿ:

ನಗರದ ಸತ್ಯನಾರಾಯಣ ಪೇಟೆ ಬಡಾವಣೆಯ ಕಡಗೋಲು ಶ್ರೀಕೃಷ್ಣ ಸಮೇತ ಪಂಚವೃಂದಾವನ ಸನ್ನಿಧಿ, ಶ್ರೀಮದುತ್ತರಾಧಿಮಠದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ನಿಮಿತ್ತ ಭಾನುವಾರ ಸಂಜೆ ಶ್ರೀ ಕೃಷ್ಣನಿಗೆ ಗಜವಾಹನ ಸೇವೆ ಸಾವಿರಾರು ಭಕ್ತರ ಮಧ್ಯೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ಶ್ರೀಮಠದ ಪ್ರಧಾನ ಅರ್ಚಕರಾದ ಪಂ.ನವೀನ್ ಆಚಾರ್, ಪಂ.ಪ್ರವೀಣ್ ಆಚಾರ್ ಅವರ ನೇತೃತ್ವದಲ್ಲಿ ಶ್ರೀಕೃಷ್ಣನಿಗೆ ನಡೆದ ವಿಶೇಷ ಪೂಜೆ ಬಳಿಕ ಉತ್ಸವಕ್ಕೆ ಚಾಲನೆ ನೀಡಲಾಯಿತು. ನಗರ ಸೇರಿದಂತೆ ನಾನಾ ಕಡೆಯಿಂದ ಆಗಮಿಸಿದ ಭಕ್ತರು ಗಜವಾಹನ ಉತ್ಸವದಲ್ಲಿ ಭಾಗವಹಿಸಿ ಭಕ್ತಿ ಸಮರ್ಪಿಸಿದರು.

ಶ್ರೀಮಠದಿಂದ ಪ್ರಾರಂಭವಾದ ಉತ್ಸವದ ಮೆರವಣಿಗೆ, ಶ್ರೀರಾಘವೇಂದ್ರ ಸ್ವಾಮೀ ಮಠ, ಶ್ರೀ ರಾಘವೇಂದ್ರ ವೃತ್ತ, ಪಾಂಡುರಂಗ ಆಸ್ಪತ್ರೆ ಮೂಲಕ ಶ್ರೀಮಠಕ್ಕೆ ತಲುಪಿತು. ಈ ವೇಳೆ ಶ್ರೀ ಮಧ್ವ ಮಹಿಳಾ ಭಜನಾ ಮಂಡಳಿ ಸದಸ್ಯರು, ಅಪ್ರಮೇಯ ಭಜನಾ ಮಂಡಳಿ, ಹೈಗ್ರೀವ ಭಜನಾ ಮಂಡಳಿ, ಮಧ್ವ ಸದನ ಭಜನಾ ಮಂಡಳಿ ಸೇರಿದಂತೆ ವಿವಿಧ ಭಜನಾ ಮಂಡಳಿ ಸದಸ್ಯರಿಂದ ಶ್ರೀಕೃಷ್ಣನ ನಾಮಸ್ಮರಣೆ ಮಾಡಲಾಯಿತು.

ಮಕ್ಕಳಿಂದ ಕೋಲಾಟ, ನೃತ್ಯ ಗಮನಸೆಳೆಯಿತು. ಇದಕ್ಕೂ ಮುನ್ನ ಶ್ರೀಮಠದಲ್ಲಿ ಮಹಿಳೆಯರು, ಚಿಕ್ಕ ಮಕ್ಕಳಿಂದ ರಂಗೋಲಿ ಸ್ಪರ್ಧೆ, ಸಂಗೀತ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಾರ್ಡ್ ನ ಮಹಾನಗರ ಪಾಲಿಕೆ ಸದಸ್ಯ ಕೆ.ಎಸ್.ಅಶೋಕ್ ಕುಮಾರ್ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಉತ್ಸವದಲ್ಲಿ ಭಾಗವಹಿಸಿ ವಿವಿಧ ರೀತಿಯ ಸೇವೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!