ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ ಜೆಡಿಎಸ್ ಜೊತೆ ಹೊಂದಾಣಿಕೆ ಹಾಗೂ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಆರೋಪಕ್ಕೆ ಜೆಡಿಎಸ್ ಅಭ್ಯರ್ಥಿ ಜಿ.ಟಿ. ದೇವೇಗೌಡ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿ.ಟಿ ದೇವೇಗೌಡ, ಸಿದ್ದರಾಮಯ್ಯಗೆ ಉಪಕಾರ ಸ್ಮರಣೆ ಇಲ್ಲ. ಸಿದ್ದೇಗೌಡನ ಬಗ್ಗೆ ಈ ಹಿಂದೆಯೇ ಹೇಳಿದ್ದೆ. ಆದರೆ, ಆಗ ನಾನು ಹೇಳಿದ್ದನ್ನೆಲ್ಲಾ ಸಿದ್ದರಾಮಯ್ಯ ಮರೆತು ಹೋಗಿದ್ದಾರೆ. ಯಾರು ಈಗ ಏನೇ ಆರೋಪ ಮಾಡಿದರೂ, ನಾನು ಚಾಮುಂಡೇಶ್ವರಿ ಕ್ಷೇತ್ರದ ಜನರ ಆಶೀರ್ವಾದಿಂದ ಗೆಲ್ಲುತ್ತೇನೆ ಎಂದರು.
ನಾನು ಮಾವಿನಹಳ್ಳಿ ಸಿದ್ದೇಗೌಡನನ್ನು ಜೀವಮಾನದಲ್ಲಿ ಮಾತನಾಡಿಸಿಲ್ಲ. ಅಲ್ಲದೇ ಸಿದ್ದರಾಮಯ್ಯ ಜೀವನದುದ್ದಕ್ಕೂ ದ್ವೇಷದ ರಾಜಕಾರಣ ಮಾಡಿದರು. ಅವರಿಗಾಗಿ ಮರೀಗೌಡಗೆ ಸಾಕಷ್ಟು ದುಡಿದಿದ್ದರು. ಆದರೆ ಸಿದ್ದರಾಮಯ್ಯ ಅವರಿಗೆ ಟಿಕೆಟ್ ಕೊಡಲಿಲ್ಲ.
ಸಿದ್ದರಾಮಯ್ಯಗೆ ಚಾಮುಂಡೇಶ್ವರಿ ರಾಜಕಾರಣ ಗೊತ್ತಿಲ್ಲ. ನನ್ನ ವಿರುದ್ಧ ಯಾರನ್ನು ಕಣಕ್ಕಿಳಿಸಬೇಕು ಎನ್ನುವುದು ಗೊತ್ತಿಲ್ಲ. ನನ್ನ ಜಾಯಮಾನದಲ್ಲಿ ನಾನು ಯಾರ ಜೊತೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಸಿದ್ದೇಗೌಡನನ್ನು ನಾನು ಯಾಕೆ ಬುಕ್ ಮಾಡಲಿ ಎಂದು ಕಿಡಿಕಾರಿದರು.