ಹೊಸದಿಗಂತ ವರದಿ,ಗದಗ:
ಸಿದ್ದರಾಮಯ್ಯ ಅವರಿಗೆ ಕ್ಷೇತ್ರವೇ ಇಲ್ಲದೆ ಪರದೇಶಿಯಾಗಿ ಅಡ್ಡಾಡುತ್ತಿದ್ದಾರೆ ಎಂದು ಸಚಿವ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ವ್ಯಂಗ್ಯವಾಡಿದರು.
ನಗರದ ನಿವಾಸದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಬಿ.ಶ್ರೀರಾಮುಲು ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಲಿ ಎಂಬ ಸಿದ್ದರಾಮಯ್ಯ ಅವರ ಸವಾಲಿಗೆ ಉತ್ತರಿಸಿ ಮಾತನಾಡಿದ ಅವರು ಮೊದಲು ನಿನ್ನ ಕ್ಷೇತ್ರ ಯಾವುದೆಂದು ಸ್ಪಷ್ಟಮಾಡು ಆಮೇಲೆ ನನ್ನ ಬಗ್ಗೆ ಮಾತನಾಡು ಎಂದು ಏಕ ವಚನದಲ್ಲೇ ಮರುಸವಾಲು ಹಾಕಿದರು. ಸಿದ್ದರಾಮಯ್ಯ ಅವರಿಗೆ ಕ್ಷೇತ್ರವೇ ಇಲ್ಲದೇ ಪರದೇಶಿಯಾಗಿ ಅಡ್ಡಾಡುತ್ತಿದ್ದಾರೆ. ಪರದೇಶಿಗಳಂತೆ ದಿನಕ್ಕೊಂದು ಊರು ಅಡ್ಡಾಡುತ್ತಿರುವ ಗಿರಾಕಿಗಳಿಗೆ ಉತ್ತರ ಕೊಡುವದಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಜನರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಿದ್ದರು. ಕಾಂಗ್ರೆಸ್ ಎಷ್ಟು ಕ್ಷೇತ್ರದಲ್ಲಿ ಗೆದ್ದಿತು.. ಸಿದ್ದರಾಮಯ್ಯ ಬಾದಾಮಿಯಲ್ಲಿ ಗೆದ್ದರು. ಬಾದಾಮಿಗೆ ಬಂದು ಬಿ.ಬಿ. ಚಿಮ್ಮನಕಟ್ಟಿಯವರನ್ನು ಮುಗಿಸಿದರು. ಕಾಂಗ್ರೆಸ್ ಪಕ್ಷದಲ್ಲಿ ಎಸ್. ಆರ್. ಪಾಟೀಲ, ಜಿ. ಪರಮೇಶ್ವರ ಅವರನ್ನು ಮುಗಿಸಿದ. ಈಗ ಡಿ.ಕೆ. ಶಿವಕುಮಾರ ಅವರನ್ನು ಮುಗಿಸಬೇಕೆಂದು ಹೊರಟಿದ್ದಾನೆ ಎಂದು ಕಾಲೆಳೆದರು.
ರಾಮುಲು ಆರ್ ಎಸ್ ಎಸ್ ಗಿರಾಕಿನಾ ಎಂದಿದ್ದ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ ಸಚಿವರು, ನನ್ನ ಬಗ್ಗೆ ಮಾತನಾಡುವ ಸಿದ್ದರಾಮಯ್ಯರೇನು ಕಾಂಗ್ರೆಸ್ ಗಿರಾಕಿನಾ ? ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಜೆಡಿಎಸ್ ನಲ್ಲಿ ಇದ್ದು ಬಂದವರು. ಕಾಂಗ್ರೆಸ್ ವಿರುದ್ಧ ಕೆಟ್ಟದಾಗಿ ಮಾತನಾಡಿದವರು. ನಂತರ ಕಾಂಗ್ರೆಸ್ ಸೇರಿ ಬ್ಲ್ಯಾಕ್ಮೇಲ್ ಮಾಡುತ್ತಾ ವಿರೋಧ ಪಕ್ಷದ ನಾಯಕನಾಗಿ, ಮುಖ್ಯಮಂತ್ರಿ ಆದರು ಎಂದು ಹೇಳಿದ ಅವರು ಸಿದ್ದರಾಮಯ್ಯ ಸಂಡೇ, ಮಂಡೇ ವಕೀಲಕಿ ಮಾಡಿಕೊಂಡವರು. ಕೋರ್ಟ್ಗೆ ಹೋದವರಲ್ಲ. ರಾಜೀ ಸಂದಾನ ಮಾಡುವ ವಕೀಲ. ನಾನು ಅವನ ಪ್ರಶ್ನೆಗೆ ಉತ್ತರ ಕೊಡುವದಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.