ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಎಂ ಬೊಮ್ಮಾಯಿ ಅವರ ವಿರುದ್ಧ ನಾಯಿಮರಿ ಎನ್ನುವ ಪದಬಳಕೆ ಮಾಡಿ, ಕೀಳುಮಟ್ಟದಲ್ಲಿ ಸಿದ್ದರಾಮಯ್ಯ ಮಾತನಾಡಿದ್ದು, ಟೀಕೆಗೆ ಬಳಸಿದ ಶಬ್ದಗಳಿಗೆ ರಾಜ್ಯದ ಜನತೆ ಬಳಿ ಕ್ಷಮೆಯಾಚಿಸಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಸ್ಥಾನ ಸಾಂವಿಧಾನಿಕ ಹುದ್ದೆ. ಅದಕ್ಕೆ ಗೌರವ ಕೊಡುವುದು ಪ್ರತಿಯೊಬ್ಬರ ಕರ್ತವ್ಯ. ಅದರಲ್ಲೂ ಅತ್ಯಂತ ಹಿರಿಯ ರಾಜಕಾರಣಿಯಾಗಿರುವ ಸಿದ್ದರಾಮಯ್ಯ ಅವರಿಂದ ಇಂತಹ ಪದವನ್ನು ನಿರೀಕ್ಷೆ ಮಾಡಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
10 ವರ್ಷಗಳ ಕಾಲ ಸೂಪರ್ ಪವರ್ ಪ್ರಧಾನಿ ಎನಿಸಿದ್ದ ಸೋನಿಯಾ ಗಾಂಧಿ ಮುಂದೆ ಕೈಕಟ್ಟಿ ನಿಲ್ಲುವಾಗ ಸಿದ್ದರಾಮಯ್ಯ ಅವರ ಸ್ವಾಭಿಮಾನ ಎಲ್ಲಿ ಹೋಗಿತ್ತು? ಪ್ರಿಯಾಂಕ ಗಾಂಧಿ, ರಾಹುಲ್ ಗಾಂಧಿ ಅಂಥವರ ಮುಂದೆ ‘ಜೀ ಹುಜೂರ್’ ಎನ್ನುವ ಸಿದ್ದರಾಮಯ್ಯಗೆ ಭಾರತದ ಸಂಸ್ಕೃತಿ, ಸಂಸ್ಕಾರ ಕೊಟ್ಟಿದೆಯೇ ಎಂದು ಪ್ರಶ್ನಿಸಿದ್ದಾರೆ.
ನಮ್ಮ ದೇಶದಲ್ಲಿ ಹುದ್ದೆ, ವ್ಯಕ್ತಿ ಮತ್ತು ವಯಸ್ಸಿಗೆ ಬೆಲೆ ಕೊಡುತ್ತಾರೆ. ನರೇಂದ್ರ ಮೋದಿ ಅವರು ಇದುವರೆಗೂ ಒಬ್ಬರಿಂದಲೂ ಕಾಲಿಗೆ ನಮಸ್ಕರಿಸಿಕೊಂಡಿಲ್ಲ. ನನ್ನ ಮುಂದೆ ಕೈ ಕಟ್ಟಿ ನಿಲ್ಲಿ ಎಂದು ಹೇಳಿಲ್ಲ. ಒಬ್ಬ ಅತ್ಯುತ್ತಮ ಸಂಸದೀಯ ಪಟು ಎನಿಸಿದ ಬೊಮ್ಮಾಯಿ ಬಗ್ಗೆ ಈ ರೀತಿ ಮಾತನಾಡಿರುವುದು ಕೀಳು ಅಭಿರುಚಿ ತೋರಿಸುತ್ತದೆ ಎಂದಿದ್ದಾರೆ.