ಒಡಿಶಾ ರೈಲು ದುರಂತಕ್ಕೆ ಸಿಗ್ನಲ್ ಸಮಸ್ಯೆಯೇ ಕಾರಣ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಡಿಶಾದ ಬಾಲಸೋರ್‌ ಜಿಲ್ಲೆಯ ಬಹನಗಾ ರೈಲು ನಿಲ್ದಾಣದ ಬಳಿ ಕೋರಮಂಡಲ್‌ ಎಕ್ಸ್‌ಪ್ರೆಸ್‌, ಯಶವಂತಪುರ ಹೌರಾ ಎಕ್ಸ್‌ಪ್ರೆಸ್‌ ಹಾಗೂ ಗೂಡ್ಸ್ ರೈಲಿನ ನಡುವಿನ ತ್ರಿವಳಿ ರೈಲುದುರಂತಕ್ಕೆ ಸಿಗ್ನಲ್ ಸಮಸ್ಯೆ ಕಾರಣ ಎಂದು ಹಿರಿಯ ರೈಲ್ವೆ ಅಧಿಕಾರಿಗಳು ನಡೆಸಿದ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಇಂದು ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಪ್ರಾಥಮಿಕ ವರದಿ ಸಲ್ಲಿಕೆ ಮಾಡಿದ್ದಾರೆ.

ಶುಕ್ರವಾರ ಸಂಜೆ 7 ಗಂಟೆಯ ಸುಮಾರಿಗೆ ಬಾಲಸೋರ್‌ನ (Balasore) ಬಹನಾಗ ಬಜಾರ್ ರೈಲ್ವೆ ನಿಲ್ದಾಣದ (Bahanaga Bazar railway station) ಬಳಿ ಕೋರಮಂಡಲ್ ಎಕ್ಸ್‌ಪ್ರೆಸ್ ಗೆ ( 12841 – Coromandel Express) ಗೊತ್ತುಪಡಿಸಿದ ಮಾರ್ಗದಲ್ಲಿಯೇ ಚಲಿಸಲು ಹಸಿರು ನಿಶಾನೆ ತೋರಲಾಗಿದೆ ಮತ್ತು ಟೇಕ್ ಆಫ್ ಮಾಡಲಾಗಿದೆ.ಆದ್ರೆ ತಪ್ಪಾಗಿ ಗ್ರೀನ್ ಸಿಗ್ನಲ್ ಬಂದ ತಕ್ಷಣ ಅದನ್ನು ಹಿಂತೆಗೆದುಕೊಳ್ಳಲಾಯಿತು ಅಷ್ಟರಲ್ಲಾಗಲೇ ರೈಲು ಲೂಪ್ ಲೈನ್‌ಗೆ (Loop line) ತಲುಪಿತ್ತು. ಮಾತ್ರವಲ್ಲ ಅಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ (goods train) ಡಿಕ್ಕಿ ಹೊಡೆದು ಹಳಿ ತಪ್ಪಿತು. ಈ ವೇಳೆ ಬೆಂಗಳೂರಿನ ಯಶವಂತಪುರದಿಂದ ಡೌನ್‌ ಲೈನ್‌ನಲ್ಲಿ ಬಂದ ಹೌರಾ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ (Bengaluru-Howrah Super Fast express) ರೈಲಿನ ಎರಡು ಬೋಗಿಗಳು ಹಳಿತಪ್ಪಿದವು ಎಂದು ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇನ್ನು ವರದಿಯಲ್ಲಿ ಎರಡು ರೈಲುಗಳು ಡಿಕ್ಕಿ ಹೊಡೆದ ಮಾರ್ಗವು ಭಾಗಶಃ ತುಕ್ಕು ಹಿಡಿದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನಾಲ್ವರು ಹಿರಿಯ ರೈಲ್ವೆ ಅಧಿಕಾರಿಗಳಾದ ಜೆಎನ್ ಸುಬುಧಿ, ಆರ್ ಕೆ ಬ್ಯಾನರ್ಜಿ, ಆರ್ ಕೆ ಪಂಜಿರಾ ಮತ್ತು ಎಕೆ ಮೊಹಂತು ಅವರು ನಡೆಸಿದ ತನಿಖೆಯಿಂದ ಈ ವಿವರಗಳು ಬಹಿರಂಗಗೊಂಡಿವೆ.

ಅಧಿಕಾರಿಗಳು ಶುಕ್ರವಾರ ರಾತ್ರಿ ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿ ಅಪಘಾತದ ಸುತ್ತಲಿನ ವಿವರಗಳನ್ನು ಪರಿಶೀಲಿಸಿದರು. ಗಮನಾರ್ಹ ವಿಷಯವೆಂದರೆ ಇವು ಕೇವಲ ಪ್ರಾಥಮಿಕ ಸಂಶೋಧನೆಗಳು ಮತ್ತು ಒಡಿಶಾ ರೈಲು ಅಪಘಾತದ ಸಂಪೂರ್ಣ ವರದಿಯನ್ನು ರೈಲ್ವೆ ಸುರಕ್ಷತಾ ಆಯುಕ್ತರ ವಿಚಾರಣೆಯ ನಂತರ ಬಹಿರಂಗಪಡಿಸಲಾಗುತ್ತದೆ.

ಲೂಪ್ ಲೈನ್‌ಗಳು ನಿಲ್ದಾಣಗಳ ಸುತ್ತಲೂ ನಿರ್ಮಿಸಲಾದ ರೈಲು ಹಳಿಗಳಾಗಿವೆ ಮತ್ತು ರೈಲನ್ನು ಮುಖ್ಯ ಮಾರ್ಗದಿಂದ ತಿರುಗಿಸುತ್ತವೆ. ರೈಲುಗಳನ್ನು ಸಾಮಾನ್ಯವಾಗಿ ವಿವಿಧ ಕಾರಣಗಳಿಗಾಗಿ ಲೂಪ್ ಲೈನ್‌ನಲ್ಲಿ ನಿಲುಗಡೆ ಮಾಡಲಾಗುತ್ತದೆ ಮತ್ತು ರೈಲನ್ನು ಹಿಂದಿಕ್ಕುವ ತಂತ್ರಗಳಲ್ಲಿಯೂ ಬಳಸಲಾಗುತ್ತದೆ. ಲೂಪ್ ಲೈನ್ ಸಾಮಾನ್ಯವಾಗಿ 750 ಮೀಟರ್ ಉದ್ದವಿರುತ್ತದೆ ಮತ್ತು ಮುಖ್ಯ ಹಳಿಯನ್ನು ಸೇರಲು ಸಹಾಯ ಮಾಡುತ್ತದೆ.

ಅದೇ ರೀತಿ ಒಡಿಶಾ ರೈಲು ಅಪಘಾತ ಸಂಭವಿಸಿದ ರೈಲ್ವೆ ಮಾರ್ಗಗಳು ಕವಾಚ್ ಎಂಬ ಸ್ಥಳೀಯ ಸ್ವಯಂಚಾಲಿತ ರೈಲು ರಕ್ಷಣೆ (ಎಟಿಪಿ) ವ್ಯವಸ್ಥೆಯಿಂದ ಆವರಿಸಲ್ಪಟ್ಟಿಲ್ಲ. ರಿಸರ್ಚ್ ಡಿಸೈನ್ಸ್ ಮತ್ತು ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ (RDSO) ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ ಮತ್ತು ಇನ್ನೊಂದು ರೈಲು ಅದೇ ಮಾರ್ಗದಲ್ಲಿ ಇರುವುದು ಪತ್ತೆಯಾದರೆ ಸ್ವಯಂಚಾಲಿತವಾಗಿ ರೈಲನ್ನು ನಿಲ್ಲಿಸುವ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿ ಮಾನವ ದೋಷ, ಸಿಗ್ನಲ್ ವೈಫಲ್ಯ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ವರದಿ ಹೇಳುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!