ಸರ್, ವಯಸ್ಸು ಮೀರುತ್ತಿದೆ, ನಮಗೆ ವಧು ಹುಡುಕಿಕೊಡಿ: ಎಚ್‌ಡಿಕೆಗೆ ಬಂತು ಯುವ ರೈತನ ಪತ್ರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೇರಲು ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ಪಂಚರತ್ನ ಯಾತ್ರೆಯನ್ನು ಕೈಗೊಂಡಿದ್ದಾರೆ. ಈ ವೇಳೆ ಕೋಲಾರದಲ್ಲಿ ರೈತ ಯುವಕನೊಬ್ಬ ಕುಮಾರಸ್ವಾಮಿ ಬಳಿ ವಿಶೇಷ ಮನವಿಯೊಂದನ್ನು ಮಾಡಿಕೊಂಡಿದ್ದಾನೆ.

ಅದೇನೆಂದರೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ಕೂಡಲೇ ‘ಆಯಾ ಜಿಲ್ಲೆಯ ವಧುವು ಅದೇ ಜಿಲ್ಲೆಯ ವರನನ್ನೇ ವರಿಸಬೇಕು’ ಎಂಬ ನಿಯಮವನ್ನು ಜಾರಿಗೆ ತರಬೇಕು ಎಂದು.

ಈ ಕುರಿತು ಪತ್ರ ಬರೆದ ರೈತ ಯುವಕ ಎಂ.ಕೆ. ಧನಂಜಯಕುಮಾರ್‌, ‘ಕೋಲಾರ ಜಿಲ್ಲೆಯಲ್ಲಿ ಒಕ್ಕಲುತನ ಮಾಡುವ ರೈತರ ಮಕ್ಕಳಿಗೆ ವಧುಗಳು ಸಿಗದೆ ಸಮಸ್ಯೆಯಾಗುತ್ತಿದೆ. ಜಿಲ್ಲೆಯಲ್ಲಿ ಎಷ್ಟೋ ಜನ ಗಂಡು ಮಕ್ಕಳಿಗೆ ವಯಸ್ಸು ಮೀರುತ್ತಿದೆ. ಹಲವರಿಗೆ 35, 40, 45 ವರ್ಷಗಳಾದರೂ ಹೆಣ್ಣುಗಳೇ ಸಿಗುತ್ತಿಲ್ಲ. ಇದೊಂದು ದೊಡ್ಡ ಸಮಸ್ಯೆಯಾಗಿದೆ. ಇದಕ್ಕೆ ಕಾರಣ ನಮ್ಮ ಜಿಲ್ಲೆಯಲ್ಲಿನ ಹೆಣ್ಣು ಮಕ್ಕಳನ್ನು ಹೊರ ಜಿಲ್ಲೆಗಳ ವರರಿಗೆ ಮದುವೆ ಮಾಡಿ ಕೊಡಲಾಗುತ್ತಿದೆ. ಈ ಬಾರಿ ತಾವು ಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸುತ್ತೀರಿ, ಈ ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೀರಿ ಎಂದು ನಂಬಿದ್ದೇನೆ.ಈ ಸಂದರ್ಭದಲ್ಲಿ ತಾವುಗಳು ದಯಮಾಡಿ ಈ ರೀತಿಯ ನಿಯಮವನ್ನು ಜಾರಿಗೆ ತರಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ. ನಿಯಮವೇನೆಂದರೆ ಎಲ್ಲ ಜಿಲ್ಲೆಗಳಲ್ಲಿ ತಮ್ಮ ಜಿಲ್ಲೆಯ ಹೆಣ್ಣು ಮಕ್ಕಳನ್ನು ಬೇರೆ ಜಿಲ್ಲೆಗಳಿಗೆ ಮದುವೆ ಮಾಡಿ ಕೊಡಬಾರದು. ಅವರು ಆಯಾ ಜಿಲ್ಲೆಗಳ ಗಂಡುಗಳನ್ನೇ ಮದುವೆ ಮಾಡಿಕೊಳ್ಳಬೇಕೆಂಬ ನಿಯಮವನ್ನು ಜಾರಿಗೆ ತರಬೇಕು’ ಎಂದು ಪತ್ರದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!