ಹೊಸದಿಗಂತ ಡಿಜಿಟಲ್ ಡೆಸ್ಕ್:
ದಿನದಿಂದ ದಿನಕ್ಕೆ ಬಲಿಷ್ಟವಾಗುತ್ತಿರುವ ʼಸಿತ್ರಾಂಗ್ʼ ಚಂಡಮಾರುತವು ಬಾಂಗ್ಲಾದೇಶದಲ್ಲಿ ಅಬ್ಬರಿಸುತ್ತಿದ್ದು ಚಂಡಮಾರುತದ ಪ್ರಭಾವಕ್ಕೆ ಸಿಕ್ಕು ಬಾಂಗ್ಲಾದೇಶದ ಹಲವು ಪ್ರದೇಶಗಳು ಸಂಕಷ್ಟ ಅನುಭವಿಸುತ್ತಿವೆ.
ಬಾಂಗ್ಲಾದೇಶದ ಭೋಲಾ ಮತ್ತು ನರೈಲ್ ಜಿಲ್ಲೆಗಳಲ್ಲಿ ಸಿತ್ರಾಂಗ್ ಚಂಡಮಾರುತದ ಪ್ರಭಾವದಿಂದ ಮೂರು ಜನರು ಸಾವನ್ನಪ್ಪಿದ್ದಾರೆ. ದೌಲತ್ಖಾನ್ ಮತ್ತು ಭೋಲಾ ಮತ್ತು ನರೈಲ್ನ ಲೋಹಾಗ್ರಾದಲ್ಲಿ ಚಾರ್ಫಾಶನ್ನಲ್ಲಿ ಮರವೊಂದು ಬಿದ್ದು ಮೂವರು ಸಾವನ್ನಪ್ಪಿದ್ದಾರೆ. ಮೂವರಿಗೆ ಗಾಯಗಳಗಿವೆ ಎಂದು ಜಿಲ್ಲಾಡಳಿತ ತಿಳಿಸಿದೆ ಎಂದು ಮೂಲಗಳು ವರದಿ ಮಾಡಿವೆ.
ಸೋಮವಾರ, ಸಿತ್ರಾಂಗ್ ಚಂಡಮಾರುತವು ರಾಷ್ಟ್ರದ ನೈಋತ್ಯ ಕರಾವಳಿಯನ್ನು ಸಮೀಪಿಸುತ್ತಿದ್ದಂತೆ ಬಾಂಗ್ಲಾದೇಶವು 2.19 ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ವಿಪತ್ತು ನಿರ್ವಹಣಾ ಸಚಿವಾಲಯದ ವಕ್ತಾರ ಮೊಹಮ್ಮದ್ ಮೊನಿರುಜ್ಜಮಾನ್ ಈ ಕುರಿತು ಪಿಟಿಐಗೆ ಮಾಹಿತಿ ನೀಡಿದ್ದು ಬಾಂಗ್ಲಾದೇಶದ ಅಧಿಕಾರಿಗಳು 6,925 ಸೈಕ್ಲೋನ್ ಕೇಂದ್ರಗಳನ್ನು ಸಿದ್ಧಪಡಿಸಲಾಗಿದೆ. ಚಂಡಮಾರುತದ ಪ್ರಭಾವಕ್ಕೆ ಸಿಲುಕಿದವರಿಗೆ ಇಲ್ಲಿ ಆಶ್ರಯ ನೀಡಲಾಗುತ್ತದೆ ಎಂದಿದ್ದಾರೆ.
“ಸೋಮವಾರ ಸಂಜೆ 5 ಗಂಟೆಯ ವೇಳೆಗೆ 15 ಕರಾವಳಿ ಜಿಲ್ಲೆಗಳಲ್ಲಿ ಕನಿಷ್ಠ 219,990 ಜನರನ್ನು ಸೈಕ್ಲೋನ್ ಕೇಂದ್ರಗಳಿಗೆ ಕರೆದೊಯ್ಯಲಾಗಿದೆ” ಎಂದು ಮೊನಿರುಜ್ಜಮಾನ್ ಪಿಟಿಐಗೆ ತಿಳಿಸಿದ್ದಾರೆ.
ಚಂಡಮಾರುತದ ತುದಿ ಕರಾವಳಿಯನ್ನು ದಾಟಲು ಪ್ರಾರಂಭಿಸುತ್ತಿದ್ದಂತೆ ಕರಾವಳಿ ಜಿಲ್ಲೆಗಳಲ್ಲಿ ಚಂಡಮಾರುತದ ಅಲೆಗಳು ಮತ್ತು ಭಾರೀ ಮಳೆ ಪ್ರಾರಂಭವಾಗಿದೆ ಎಂದು ಹವಾಮಾನ ತಜ್ಞ ಮೊನ್ವಾರ್ ಹೊಸೈನ್ ರಾಯಿಟರ್ಸ್ಗೆ ತಿಳಿಸಿದ್ದಾರೆ. ನೆರವು ಕಾರ್ಯಕರ್ತರು ಕಾಕ್ಸ್ ಬಜಾರ್ನಲ್ಲಿ ಮಿಲಿಯನ್ಗಿಂತಲೂ ಹೆಚ್ಚು ರೋಹಿಂಗ್ಯಾಗಳನ್ನು ಹೊಂದಿರುವ ನಿರಾಶ್ರಿತರ ಶಿಬಿರಗಳಲ್ಲಿ ಆಹಾರ, ಟಾರ್ಪಾಲಿನ್ಗಳು ಮತ್ತು ನೀರು ಶುದ್ಧೀಕರಣ ಮಾತ್ರೆಗಳಂತಹ ತುರ್ತು ವಸ್ತುಗಳನ್ನು ಸಂಗ್ರಹಿಸಲಾಗಿದೆ.
ಏತನ್ಮಧ್ಯೆ ಭಾರತೀಯ ಹವಾಮಾನ ಇಲಾಖೆಯು ಸಿತ್ರಾಂಗ್ ಚಂಡಮಾರುತ ವೇಗದಿಂದ ಮುನ್ನುಗ್ಗುತ್ತಿದ್ದು ಈಶಾನ್ಯ ರಾಜ್ಯಗಳಿಗೆ ಎಚ್ಚರಿಕೆ ನೀಡಿದೆ. ಸದ್ಯದ ಪರಿಸ್ಥಿತಿ ಆಧಾರದಲ್ಲಿ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಕಡಿಮೆ ಪ್ರಮಾನದಲ್ಲಿ ಮಳೆ ಸುರಿಯಬಹುದು ಎಂದು ನಿರೀಕ್ಷಿಸಲಾಗಿದೆ.