ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾನುವಾರ ದೇವಸ್ಥಾನದ ಮುಂಭಾಗದಲ್ಲಿ ಕಾರಿನಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು 29 ವರ್ಷದ ವ್ಯಕ್ತಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಕೊಯಮತ್ತೂರು ನಗರ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಮೊಹಮ್ಮದ್ ತಳಕಾ, ಮೊಹಮ್ಮದ್ ಅಜರುದ್ದೀನ್, ಮೊಹಮ್ಮದ್ ರಿಯಾಸ್, ಫಿರೋಜ್ ಇಸ್ಮಾಯಿಲ್ ಮತ್ತು ಮೊಹಮ್ಮದ್ ನವಾಜ್ ಇಸ್ಮಾಯಿಲ್ ಎಂದು ಗುರುತಿಸಲಾಗಿದೆ.
ಮೃತ ಮುಬಿನ್ ನಿವಾಸದಲ್ಲಿ ಶೋಧ ನಡೆಸಿದಾಗ ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳು ಪತ್ತೆಯಾಗಿವೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಮೃತರನ್ನು ಉಕ್ಕಡಂ ನಿವಾಸಿ ಜೇಮ್ಸಾ ಮುಬಿನ್ ಎಂದು ಗುರುತಿಸಲಾಗಿದೆ.ಈ ನಡುವೆ ಡಿಜಿಪಿ ಸೈಲೇಂದ್ರ ಬಾಬು, ಎಡಿಜಿಪಿ ತಮರೈ ಕಣ್ಣನ್, ಗುಪ್ತಚರ ಐಜಿ ಸೆಂಥಿಲ್ ವೇಲನ್ ಮತ್ತು ವಿಶೇಷ ತನಿಖಾ ವಿಭಾಗದ ಎಸ್ಪಿ ಸ್ಟೀಫನ್ ಜೆಸುಪಥಮ್ ಅವರು ಚೆನ್ನೈನಿಂದ ಕೊಯಮತ್ತೂರಿಗೆ ಧಾವಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
ತನಿಖೆ ಸರಿಯಾದ ಹಾದಿಯಲ್ಲಿ ಸಾಗುತ್ತಿರುವ ಕಾರಣ ಈ ಘಟನೆಗೆ ಸಂಬಂಧಿಸದಂತೆ ರಾಷ್ಟ್ರೀಯ ತನಿಖಾ ತಂಡದ (ಎನ್ಐಎ) ಅಗತ್ಯವಿಲ್ಲ ಎಂದು ಡಿಜಿಪಿ ಸೈಲೇಂದ್ರ ಬಾಬು ಹೇಳಿದರು. ಉಕ್ಕಡಂ ಮುಸ್ಲಿಂ ಬಹುಸಂಖ್ಯಾತ ಜನಸಂಖ್ಯೆ ಹೊಂದಿರುವ ಸೂಕ್ಷ್ಮ ಪ್ರದೇಶವಾಗಿದೆ. ಉಕ್ಕಡಂನ ಪ್ರಸಿದ್ಧ ದೇವಾಲಯದ ಬಳಿ ಈ ಸ್ಫೋಟ ಸಂಭವಿಸಿರುವುದರಿಂದ, ‘ಕೊಟ್ಟೈ ಈಶ್ವರನ್ ದೇವಾಲಯ’ದ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಕೊಯಮತ್ತೂರಿನಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಕೊಯಮತ್ತೂರು ಸಿಲಿಂಡರ್ ಸ್ಫೋಟದಲ್ಲಿ ರಾಜ್ಯ ಗುಪ್ತಚರ ವೈಫಲ್ಯಕ್ಕಾಗಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸರ್ಕಾರವನ್ನು ಪ್ರಶ್ನಿಸಿರುವ ತಮಿಳುನಾಡು ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಕೆ ಅಣ್ಣಾಮಲೈ, ಇದು ಐಸಿಸ್ ನಂಟು ಹೊಂದಿರುವ ಭಯೋತ್ಪಾದಕ ದಾಳಿ ಎಂದು ಹೇಳಿದ್ದಾರೆ.