ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಮಸ್ತ ಸ್ತ್ರೀ ಕುಲಕ್ಕೆ ಮಾದರಿ : ಶಾಸಕ ತಿಪ್ಪಾರೆಡ್ಡಿ

ಹೊಸ ದಿಗಂತ ವರದಿ, ಚಿತ್ರದುರ್ಗ:

ಸಮಾಜದ ಒಳಿತಿಗಾಗಿ ಉತ್ತಮ ಸಂದೇಶ, ತತ್ವ, ಸಿದ್ಧಾಂತ, ಆದರ್ಶಗಳನ್ನು ನೀಡಿದ ಮಹನೀಯರನ್ನು ಸ್ಮರಿಸಿ, ಮುಂದಿನ ಪೀಳಿಗೆಗೆ ಪರಿಚಯಿಸಲು ಮಹನೀಯರ ಜಯಂತಿಗಳನ್ನು ಸರ್ಕಾರದ ವತಿಯಿಂದ ಆಚರಿಸಲಾಗುತ್ತಿದೆ. ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಮಸ್ತ ಸ್ತ್ರೀ ಕುಲಕ್ಕೆ ಮಾದರಿಯಾಗಿದ್ದಾಳೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ನಗರದ ತ.ರಾ.ಸು. ರಂಗಮಂದಿರದಲ್ಲಿ ಶಿವಶರಣೆ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ತ್ರೀ ಕುಲಕ್ಕೆ ಹೇಮರೆಡ್ಡಿ ಮಲ್ಲಮ್ಮ ಕೈಗನ್ನಡಿಯಾಗಿದ್ದಾಳೆ. ಸ್ವಚ್ಛ ಮನಸ್ಸಿನಿಂದ ಕಾಯಕ ಮಾಡಿದಾಗ ಕಾಯಕಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಹೇಮರೆಡ್ಡಿ ಮಲ್ಲಮ್ಮನ ತತ್ವಾದರ್ಶಗಳನ್ನು ಇಂದಿನ ಪೀಳಿಗೆಯವರು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಮಾತನಾಡಿ ಹೇಮರೆಡ್ಡಿ ಮಲ್ಲಮ್ಮ ಸ್ತ್ರೀ ಕುಲಕ್ಕೆ ಮಾದರಿಯಾದಂತಹ ಮಹಿಳೆ. ಅವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿವೆ. ತನ್ನ ಕುಟುಂಬದಲ್ಲಿ ಸಾಕಷ್ಟು ನೋವುಗಳನ್ನುಂಡು, ಜೀವನ ಸಾಗಿಸುತ್ತಾ ಸದಾ ಶಿವನ ಧ್ಯಾನದಲ್ಲಿ ಕಾಯಕವನ್ನು ಮಾಡಿದ ಮಹಾಸಾಧ್ವಿ ಮಲ್ಲಮ್ಮ ಉನ್ನತ ಆಧ್ಯಾತ್ಮಿಕ ಶಕ್ತಿ ಹೊಂದಿದ್ದಳು ಎಂದರು.
ಮದ್ಯವ್ಯಸನಿಯಾಗಿದ್ದ ತನ್ನ ಮೈದುನ ವೇಮನನ್ನು ಮಹಾಯೋಗಿಯಾಗಿ ಪರಿವರ್ತಿಸಿದಳು. ಸಮಾಜದ ಪರಿವರ್ತನೆಗೆ ಶರಣೆ ಮಲ್ಲಮ್ಮನ ಆದರ್ಶಗಳು ಇಂದಿಗೂ ಅವಶ್ಯಕ. ಎಂತಹ ಕೆಟ್ಟ ವ್ಯಕ್ತಿಗಳ್ಳನ್ನಾದರೂ ಪರಿವರ್ತಿಸುವುದು ಸಾಧ್ಯ ಎಂಬುದನ್ನು ಹೇಮರೆಡ್ಡಿ ಮಲ್ಲಮ್ಮ ತೋರಿಸಿ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ವೀರಶೈವ ಲಿಂಗಾಯತ ಹೇಮರೆಡ್ಡಿ ಮಲ್ಲಮ್ಮ ಸಮಾಜದ ಅಧ್ಯಕ್ಷ ಜಿ.ಚಿದಾನಂದಪ್ಪ ಮಾತನಾಡಿ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜನಮಾನಸದಲ್ಲಿ ತನ್ನ ಭಕ್ತಿ ಹಾಗೂ ಕಾಯಕದಿಂದ ಮನೆಮಾತಾಗಿದ್ದಾಳೆ. ಕೌಟುಂಬಿಕ ಸಂಕ?ಗಳನ್ನು ಮೆಟ್ಟಿ ನಿಂತು, ಆದರ್ಶ ಮೌಲ್ಯಗಳನ್ನು ಬದುಕಿನಲ್ಲಿ ರೂಢಿಸಿಕೊಂಡು ಸಾಮಾಜಿಕ ಹಾಗೂ ಧಾರ್ಮಿಕ ಚಿಂತನೆಯಲ್ಲಿ ಸಾಧನೆಗೈದ ಮಹಾಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸ್ತ್ರೀ ಕುಲಕ್ಕೆ ಮಾದರಿ. ಶ್ರೀಶೈಲ ಮಲ್ಲಿಕಾರ್ಜುನನನ್ನು ಆರಾಧ್ಯ ದೈವವಾಗಿ ಸ್ವೀಕರಿಸಿ, ಸಾಕ್ಷಾತ್ಕರಿಸಿಕೊಂಡ ಸಾಧ್ವಿ ಮಲ್ಲಮ್ಮ ಎಂದರು.
ಸಂದಿಗ್ಧ ಮನೆತನದಲ್ಲಿ ತನ್ನ ಸಂಸಾರ ನಡೆಸಿದ ಮಲ್ಲಮ್ಮ ಮನೆಯ ಎಲ್ಲಾ ಸದಸ್ಯರಲ್ಲೂ ಪರಿವರ್ತನೆ ತರುತ್ತಾಳೆ. ದಾನ ಚಿಂತಾಮಣಿಯಾದ ಮಲ್ಲಮ್ಮ ಕಾಯದಲ್ಲಿ ದೇವರನ್ನು ಕಾಣುವ ಮಾರ್ಗವನ್ನು ತೋರಿದಳು ಎಂದು ತಿಳಿಸಿದರು.
ಚಳ್ಳಕೆರೆ ಬಾಪೂಜಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಜಿ.ವಿ.ರಾಜಣ್ಣ ಉಪನ್ಯಾಸದಲ್ಲಿ, ಕಾಯಕದ ಮೂಲಕ ದೇವರನ್ನು ಒಲಿಸಿಕೊಂಡ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ. ಆಧುನಿಕತೆಯಿಂದ ಸಮಾಜದಲ್ಲಿ ಬದಲಾವಣೆಯಾಗುತ್ತಿದೆ. ಕೌಟುಂಬಿಕ ವಿಚಾರದಲ್ಲಿ ಪ್ರಸ್ತುತ ದಿನಮಾನಗಳಲ್ಲಿ ನಾನಾ ರೀತಿಯ ಸ್ಥಿತ್ಯಂತರ ಕಂಡುಬರುತ್ತಿದೆ. ಇಂತಹ ಸಂದರ್ಭದಲ್ಲಿ ನಾವು ಹೇಮರೆಡ್ಡಿ ಮಲ್ಲಮ್ಮ ಅವರ ಆದರ್ಶ, ತತ್ವಗಳನ್ನು ನೆನೆಪಿಸಿಕೊಳ್ಳುವುದು ಅತ್ಯಂತ ಸೂಕ್ತ ಎನ್ನಿಸುತ್ತದೆ ಎಂದರು.
ಮಲ್ಲಮ್ಮ ತನ್ನ ಕುಟುಂಬದಿಂದ ಸಾಕಷ್ಟು ಕಷ್ಟಕ್ಕೆ ಸಿಲುಕಿದರು ಸಹ ಅವುಗಳನ್ನೆಲ್ಲಾ ಮೆಟ್ಟಿ ನಿಂತು ಆಧ್ಯಾತ್ಮಿಕ ಜೀವನದೊಂದಿಗೆ ಶಿವನನ್ನು ಸಾಕ್ಷ್ಯಾತ್ಕರಿಸಿಕೊಂಡಳು. ಮಲ್ಲಮ್ಮ ಯಾವುದೇ ಸಿದ್ಧಾಂತಗಳಿಗೆ ಒಳಾಗಗದೇ ಗೃಹಿಣಿಯಾಗಿ ನೋವುಗಳನ್ನು ಅನುಭವಿಸುವ ಸ್ಥಳದಲ್ಲೇ ಇದ್ದು ಅಲ್ಲೇ ಅವುಗಳಿಗೆ ಪರಿಹಾರ ಕಂಡುಕೊಂಡವಳು. ಇಂತಹ ಮಹಾಸಾದ್ವಿ ಮಲ್ಲಮ್ಮ ಇಡೀ ರೆಡ್ಡಿ ಸಮುದಾಯಕ್ಕೆ ಆದರ್ಶಪ್ರಾಯವಾಗಿ ಹೊರಮ್ಮಿದವಳು ಎಂದು ತಿಳಿಸಿದರು.
ನಗರ ಸಭೆ ಅಧ್ಯಕ್ಷೆ ತಿಪ್ಪಮ್ಮ, ಜಿಲ್ಲಾ ವೀರಶೈವ ಲಿಂಗಾಯತ ಹೇಮರೆಡ್ಡಿ ಮಲ್ಲಮ್ಮ ಸಮಾಜದ ಪ್ರಧಾನ ಕಾರ್ಯದರ್ಶಿ ಡಿ.ಟಿ.ಶಿವಾನಂದಪ್ಪ, ಬಾಪೂಜಿ ಕಾಲೇಜಿನ ಸೂಪರಿಡೆಂಟ್ ಪಾಲಾಕ್ಷಪ್ಪ, ಕಾರ್ಯಪಾಲಕ ಇಂಜಿನಿಯರ್ ಚಂದ್ರಮೌಳಿ, ಸಮಾಜ ಸೇವಕಿ ಭಾರತಿ, ವಕೀಲರು ನಿಖಜ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯ ನಿರ್ದೇಶಕ ಬಿ.ಧನಂಜಯ ಭಾಗಿಯಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!