ಹೊಸದಿಗಂತ ವರದಿ ಮಡಿಕೇರಿ:
ಹಿಂದೂಗಳ ಸಾಮೂಹಿಕ ಹತ್ಯೆಗೆ ಸಂಚು ರೂಪಿಸಿರುವ ಪ್ರಕರಣವನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ವಿವಿಧ ಹಿಂದೂ ಸಂಘಟನೆಗಳು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಲಿವೆ.
ಮಡಿಕೇರಿ ನಗರಸಭೆಯ ಜೆ.ಡಿ.ಎಸ್. ಸದಸ್ಯ ಮುಸ್ತಾಫ ಹಾಗೂ ಬೆಟ್ಟಗೇರಿಯ ಅಬ್ದುಲ್ಲಾ ಎಂಬಿಬ್ಬರು ಸೇರಿ ಮಡಿಕೇರಿಯಲ್ಲಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ಹಿಂದೂಳಗನ್ನು ಸಾಮೂಹಿಕ ಹತ್ಯೆ ನಡೆಸಲು ಸಂಚು ರೂಪಿಸಿರುವ ಪ್ರಕರಣವನ್ನು ಖಂಡಿಸಿ ಸೋಮವಾರ ಬೆಳಗ್ಗೆ 11:30 ಗಂಟೆಗೆ ಪ್ರತಿಭಟನೆ ನಡೆಸಲಾಗುವುದು ಎಂದು ಹಿಂದೂ ಜಾಗರಣ ವೇದಿಕೆಯ ಕೊಡಗು ಜಿಲ್ಲಾ ಸಂಯೋಜಕ್ ಕುಕ್ಕೇರ ಅಜಿತ್ ಅವರು ತಿಳಿಸಿದ್ದಾರೆ.
ಸೂಕ್ತ ತನಿಖೆಗೆ ಒತ್ತಾಯ:
ಕೋಮು ಗಲಭೆಗೆ ಪ್ರಚೋದನೆ ನೀಡುವಂತಹ ಧ್ವನಿ ಮುದ್ರಣವೊಂದರ ಬಗ್ಗೆ ಜಿಲ್ಲೆಯಲ್ಲಿ ವ್ಯಾಪಕ ಚರ್ಚೆಯಾಗುತ್ತಿದ್ದು, ಇದರ ಬಗ್ಗೆ ಕೂಲಂಕಷವಾದ ತನಿಖೆಯಾಗಬೇಕೆಂದು ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ಒತ್ತಾಯಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆಯ ಜಿಲ್ಲಾಧ್ಯಕ್ಷ ಶಾಫಿ ಸಅದಿ ಸೋಮವಾರಪೇಟೆ ಅವರು, ನಾಲ್ಕು ತಿಂಗಳ ಹಿಂದೆ ಮಾಡಿದ್ದೆನ್ನಲಾದ ಈ ಕರೆ ಮುದ್ರಣ ಇದೀಗ ಹೊರಬಂದಿರುವುದರ ಹಿಂದಿನ ಷಡ್ಯಂತ್ರ ಬಯಲಿಗೆ ಎಳೆಯಬೇಕು. ಇದರ ಹಿಂದೆ ರಾಜಕೀಯ ಕೈವಾಡಗಳೆನಾದರೂ ಇದೆಯೇ ಎಂಬುದನ್ನೂ ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಿ ಸಮಾಜದ ಮುಂದೆ ತೆರೆದಿಡರಬೇಕಾಗಿದೆ ಎಂದು ಹೇಳಿದ್ದಾರೆ.
ಕಠಿಣ ಮೊಕದ್ದಮೆ ದಾಖಲಿಸಿ:
ತಪ್ಪಿತಸ್ಥರು ಯಾರೇ ಆಗಿದ್ದರೂ ಕೂಡಾ, ಸಮಾಜದ್ರೋಹಕ್ಕೆ ಹಾಗೂ ಕೋಮುವಾದಕ್ಕೆ ಪ್ರಚೋದನೆ ನೀಡಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಯುಎಪಿಎಯಂತಹ ಕಠಿಣ ಮೊಕದ್ದಮೆಗಳನ್ನು ದಾಖಲಿಸಿ ಶಿಕ್ಷೆಗೆ ಗುರಿಪಡಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.