ಹೊಸದಿಗಂತ ವರದಿ ಹುಬ್ಬಳ್ಳಿ:
ಇಲ್ಲಿಯ ಅಮರಗೋಳದ ಎಪಿಎಂಸಿ ದಾಸ್ತಾನು ಮಳಿಗೆ ಮೇಲೆ ದಾಳಿನಡೆಸಿದ ಸಿಸಿಬಿ ಪೊಲೀಸರು ಐವರನ್ನು ಬಂಧಿಸಿ 450 ಚೀಲ ಅಕ್ಕಿ, ನಗದು 5 ಲಕ್ಷ ರೂ. ಹಾಗೂ ನಾಲ್ಕು ವಾಹನ ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಹಿರಿಯ ಅಧಿಕಾರಿ ನಾರಾಯಣ ಬರಮನಿ ಅವರ ನೇತೃತ್ವದ ತಂಡ ದಾಳಿ ನಡೆಸಿದೆ. ದಾಸ್ತಾನು ಮಳಿಗೆಯಲ್ಲಿ ಸುಮಾರು 450ಚೀಲ( ಪ್ರತಿ ಚೀಲ50 ಕೆ.ಜೆ.), ಐದು ಲಕ್ಷ ನಗದು, ನಾಲ್ಕು ವಾಹನ ಸೇರಿ ಒಟ್ಟು 9 ಲಕ್ಷ ರೂ. ಮೌಲ್ಯ ವಸ್ತುಗಳ ವಶಪಡಿಸಿಕೊಂಡಿದ್ದಾರೆ.
ಸರ್ಕಾರದಿಂದ ಬಿಪಿಎಲ್ ಕಾರ್ಡದಾರರಿಗೆ ಉಚಿತವಾಗಿ ಪೂರೈಸುವ ಪಡಿತರ ಅಕ್ಕಿಯನ್ನು ಆರೋಪಿ ಷಣ್ಮುಖಪ್ಪ ಬೆಟಗೇರಿ ಎಂಬಾತ 10 ರಿಂದ 15 ರೂಪಾಯಿ ಬೆಲೆಗೆ ಸಾರ್ವಜನಿಕರಿಂದ ಖರೀದಿಸುತ್ತಿದ್ದ. ಬಳಿಕ ಮಂಜುನಾಥ ಹರ್ಲಾಪುರ ಅನ್ನುವವರಿಗೆ ಮಾರಾಟ ಮಾಡುತ್ತಿದ್ದ. ಮಂಜುನಾಥ ಎಂಬಾತ 35 ರಿಂದ 40 ರೂ. ಹೆಚ್ಚಿನ ಬೆಲೆಗೆ ಮಾಹಾರಾಷ್ಟ್ರಕ್ಕೆ ಮಾರಾಟ ಮಾಡಲು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವನಗರದ ಎಪಿಎಂಸಿ ಎಪಿಎಂಸಿ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ಇನ್ಸಪೆಕ್ಟರ್ ಬಾಳಪ್ಪ ಮಂಟೂರ ರವರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಸಿಸಿಬಿಯ ಎಸಿಪಿ ನಾರಾಯಣ ವಿ. ಬರಮನಿ,ಪಿಐ ರಮೇಶ ಕಾಂಬಳೆ, ಗೋಪಾಲ ರಾಠೋಡ, ಎಸ್.ಎಚ್.ಸಾಳುಂಕೆ, ಬಿ.ಎನ್.ಲಂಗೋಟಿ, ಎನ್.ಓ.ಜಾಧವ, ಎಸ್.ಸಿ.ಜಾಲವಾಡಗಿ, ಉಮೇಶ ದೊಡ್ಡಮನಿ, ಬಿ.ಎಫ್.ಬೆಳಗಾವಿ, ಮಾರುತಿ ಭಜಂತ್ರಿ, ರಾಜೀವ ಬಿಷ್ಟಂಡೇರ, ಎಫ್.ಬಿ.ಕುರಿ, ಅನೀಲ ಹುಗ್ಗಿ, ಡಿ.ಎನ್.ಗುಂಡಗೈ, ಎಸ್.ಎಚ್.ಕೆಂಪಡಿ ಆರ್.ಎಸ್.ಗುಂಜಳ ಅವರು ದಾಳಿನಡೆಸಿದ ತಂಡದಲ್ಲಿದ್ದವರು.