ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ಸಮಾಜ ಸೇವಕಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸಿಂಧುತಾಯಿ ಸಪ್ಕಾಲ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅನಾಥ ಮಕ್ಕಳ ತಾಯಿ ಎಂದೇ ಪ್ರಸಿದ್ಧರಾಗಿದ್ದ ಸಿಂಧುತಾಯಿ ನಿನ್ನೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ.
75 ವರ್ಷದ ಸಿಂಧುತಾಯಿ ಅವರಿಗೆ ತಿಂಗಳ ಹಿಂದೆ ಹರ್ನಿಯಾ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಇದಾದ ನಂತರ ಅವರು ನಿಧಾನವಾಗಿ ಚೇತರಿಕೆ ಕಾಣುತ್ತಿದ್ದರು. ನಿನ್ನೆ ರಾತ್ರಿ ಹೃದಯಾಘಾತದಿಂದ ಮುಂಬೈನ ಗೆಲಾಕ್ಸಿ ಕೇರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಬಡತನದಲ್ಲೇ ಬೆಳೆದ ಸಿಂಧುತಾಯಿ ತನ್ನ 12 ನೇ ವರ್ಷದಲ್ಲೇ 32 ವರ್ಷದ ವ್ಯಕ್ತಿಯನ್ನು ಮದುವೆ ಆದರು. ಆ ಸಮಯದಲ್ಲಿ ಬಾಲ್ಯವಿವಾಹ ಪದ್ಧತಿ ಜಾರಿಯಲ್ಲಿತ್ತು. ಬಡತನದಿಂದ ಹೊರಬರಲು ಕುಟುಂಬದವರು 32 ವರ್ಷದ ವ್ಯಕ್ತಿಗೆ ಪುಟ್ಟ ಬಾಲಕಿಯನ್ನು ಕೊಟ್ಟು ಮದುವೆ ಮಾಡಿದ್ದರು. ಮೂರನೇ ಮಗುವಿಗೆ ಗರ್ಭಿಣಿಯಾಗಿದ್ದಾಗ, ಇವರ ಪತಿ ಇವರನ್ನು ತೊರೆದರು. ತವರು ಮನೆಯವರು ಇವರನ್ನು ಸೇರಿಸಲಿಲ್ಲ. ತುಂಬು ಗರ್ಭಿಣಿಯಾದರೂ ಅನಾಥಾಶ್ರಮಗಳಲ್ಲಿ ಕೆಲಸ ಮಾಡಿ, ಅಲ್ಲಿಯೇ ಉಳಿದರು. ಅನಾಥ ಮಕ್ಕಳಿಗೆ ತನಗೆ ಬಂದ ಸ್ಥಿತಿ ಬರಬಾರದು ಎಂದು ಅನಾಥಾಶ್ರಮವೊಂದನ್ನು ಕಟ್ಟಿದರು.
ಕಷ್ಟಗಳಲ್ಲಿ ಮುಳುಗೆದ್ದಿದ್ದ ಸಿಂಧುತಾಯಿ ಬೇರೆಯವರ ಕಷ್ಟಕ್ಕೆ ಸ್ಪಂದಿಸುವ ಸಹೃದಯಿ. ಸಾವಿರಕ್ಕೂ ಹೆಚ್ಚು ಅನಾಥಾಶ್ರಮಗಳನ್ನು ಬೆಳೆಸಿದ ಶ್ರೇಯ ಇವರದ್ದು. ಈ ಸಾಧನೆಗೆ ಪದ್ಮಶ್ರೀ ಪ್ರಶಸ್ತಿಯೂ ಅವರನ್ನು ಅರಸಿ ಬಂದಿತ್ತು. ಸಿಂಧುತಾಯಿ ಅವರು ಸಾವಿರಾರು ಅನಾಥ ಮಕ್ಕಳನ್ನು ತೊರೆದು ಇಹಲೋಕ ತ್ಯಜಿಸಿದ್ದು, ತಾಯಿ ಕಳೆದುಕೊಂಡ ಮಕ್ಕಳು ಕಣ್ಣೀರಾಗಿದ್ದಾರೆ.