ಹೊಸದಿಗಂತ ವರದಿ,ಬಳ್ಳಾರಿ:
ನಗರದ ಅಧಿದೇವತೆ ಶ್ರೀ ಕನಕ ದುರ್ಗಮ್ಮ ದೇವಿ ಸಿಡಿಬಂಡಿ ರಥೋತ್ಸವ ಸಾವಿರಾರು ಭಕ್ತರ ಮಧ್ಯೆ ಮಂಗಳವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು.
ಗಾಣಿಗ ಸಮುದಾಯದವರಿಂದ ಅಲಂಕೃತ ಜೋಡಿ ಎತ್ತುಗಳನ್ನು ಮೆರವಣಿಗೆ ಮೂಲಕ ದೇಗುಲಕ್ಕೆ ಕರೆ ತರಲಾಯಿತು. ನಂತರ ನೆರೆದ ಸಾವಿರಾರು ಭಕ್ತರ ಮಧ್ಯೆ ದೇಗುಲ ಮೂರು ಸುತ್ತು ಸಿಡಿಬಂಡಿ ಪ್ರದಕ್ಷಿಣಿ ಹಾಕಲಾಯಿತು. ಈ ವೇಳೆ ನೆರೆದ ಸಾವಿರಾರು ಭಕ್ತರು ಬಾಳೆಹಣ್ಣು, ಹೂ, ಉತ್ತತ್ತಿ, ಎಸೆದು ಭಕ್ತಿ ಸಮರ್ಪಿಸಿದರು. ಕೋವಿಡ್-19 ಹಿನ್ನೆಲೆ ಮೂರು ವರ್ಷಗಳ ಕಾಲ ಸಿಡಿಬಂಡಿ ರಥೋತ್ಸವ ರದ್ದಾಗಿತ್ತು, ಪ್ರಸಕ್ತ ವರ್ಷ ಜಿಲ್ಲೆ ಸೇರಿದಂತೆ ನೆರೆಯ ಆಂದ್ರ, ತೆಲಂಗಾಣ ಹಾಗೂ ರಾಜ್ಯದ ನಾನಾ ಮೂಲೆಗಳಿಂದ ಭಕ್ತಸಾಗರವೇ ರಥೋತ್ಸವಕ್ಕೆ ಹರಿದು ಬಂದಿತ್ತು. ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ದೇಗುಲ ಸಮೀತಿ, ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು.
ವಿಶೇಷ ಪೂಜೆ: ಸಿಡಿಬಂಡಿ ರಥೋತ್ಸವ ನಿಮಿತ್ತ ಶ್ರೀ ಕನಕ ದುರ್ಗಮ್ಮ ದೇವಿ ದೇಗುಲದಲ್ಲಿ ಮಂಗಳವಾರ ಬೆಳಿಗ್ಗೆ ವಿಶ್ವದ ಪೂಜೆ, ಅರ್ಚನೆ, ಅಭಿಷೇಕ, ವಿಶೇಷ ಅಲಂಕಾರ, ಮಹಾನೈವೇದ್ಯ, ಮಹಾ ಮಂಗಳಾರತಿ ಸೇರಿದಂತೆ ವಿವಿಧ ಪೂಜೆಗಳು ವಿಜೃಂಭಣೆಯಿಂದ ನಡೆದವು. ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು, ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ, ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಎಮ್ಮೆಲ್ಸಿ ವೈ.ಎಂ.ಸತೀಶ್ ಸೇರಿದಂತೆ ವಿವಿಧ ಚುನಾಯಿತ ಜನಪ್ರತಿನಿಧಿಗಳು ದೇಗುಲದಲ್ಲಿ ವಿಶೇಷ ಪೂಜೆ, ಅರ್ಚನೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ಸಿಡಿಬಂಡಿ ರಥೋತ್ಸವ ನಿಮಿತ್ತ ಬಿರು ಬಿಸಲನ್ನು ಲೆಕ್ಕಿಸದೇ ದೇವಿ ದರ್ಶನ ಪಡೆಯಲು ಭಕ್ತರು ಆಗಮಿಸಿದ್ದರು. ದೇಗುಲ ಸುತ್ತಲಿನ ಮೂರು ಪ್ರಮುಖ ರಸ್ತೆಗಳು ಜನರಿಂದ ತುಂಬಿ ತುಳುಕುತ್ತಿತ್ತು, ಈ ವೇಳೆ ಕೆಲ ಭಕ್ತರು ಮಜ್ಜಿಗೆ ವಿತರಣೆ, ಪಾನಕ, ತಣ್ಣನೆ ಶುದ್ದನೀರು, ಕಬ್ಬಿನ ಹಾಲುನ್ನು ಭಕ್ತರಿಗೆ ವಿತರಿಸಿದರು.