ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ (ಕೆಸಿಆರ್) ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇಕಡಾ 4 ರಿಂದ ಶೇಕಡಾ ಹತ್ತಕ್ಕೆ ಹೆಚ್ಚಿಸಲಾಗಿದೆ ಎಂದು ಘೋಷಿಸಿದ್ದಾರೆ. ಮುಂದಿನ ವಾರದಲ್ಲಿ ಈ ನೀತಿ ಜಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಹೈದರಾಬಾದ್ನ ಎನ್ಟಿಆರ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ‘ಬುಡಕಟ್ಟು ಆತ್ಮೀಯ ಸಮ್ಮೇಳನ’ದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿಯ ನಾಯಕ ಭಾಷಣ ಮಾಡಿದ ಸಂದರ್ಭದಲ್ಲಿ ಈ ಘೋಷಣೆಯನ್ನು ಮಾಡಿದ್ದಾರೆ ಎಂದು ಮೂಲಗಳ ವರದಿ ತಿಳಿಸಿದೆ.
“ನಾನು ಇಂದು ತುಂಬಾ ಸಂತೋಷವಾಗಿದ್ದೇನೆ. ಆದಿವಾಸಿಗಳಿಗಾಗಿ ಹೈದರಾಬಾದ್ ನಗರದ ಹೃದಯಭಾಗದಲ್ಲಿರುವ ಬಂಜಾರಾ ಹಿಲ್ಸ್ನಲ್ಲಿ 60 ಕೋಟಿ ರೂಪಾಯಿ ವೆಚ್ಚದಲ್ಲಿ ಕುಮ್ರಂ ಭೀಮ್ ಆದಿವಾಸಿ ಮತ್ತು ಸೇವಾಲಾಲ್ ಬಂಜಾರ ಭವನಗಳನ್ನು ಪ್ರಾರಂಭಿಸಿದ್ದೇವೆ. ಎಲ್ಲಾ ಬುಡಕಟ್ಟು ಮತ್ತು ಆದಿವಾಸಿ ಬುಡಕಟ್ಟುಗಳಿಗೆ ಅಭಿನಂದನೆಗಳು.” ಎಂದು ಸಿಎಂ ಹೇಳಿದ್ದಾರೆ
“ಎಸ್ಟಿಗಳಿಗೆ ಮೀಸಲಾತಿಯನ್ನು ಶೇಕಡಾ 10 ಕ್ಕೆ ಹೆಚ್ಚಿಸಲು, ತೆಲಂಗಾಣ ವಿಧಾನಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಪ್ರಧಾನಿ ಮೋದಿಯವರೇ, ನೀವೇಕೆ ಒಪ್ಪಿಕೊಳ್ಳುತ್ತಿಲ್ಲ? ನಾನು ನಿಮಗೆ ಕೈಮುಗಿದು ಕೇಳುತ್ತಿದ್ದೇನೆ. ನಮ್ಮ ಬುಡಕಟ್ಟು ಮಸೂದೆಯನ್ನು ಅಂಗೀಕರಿಸಿ ಮತ್ತು ರಾಷ್ಟ್ರಪತಿಗಳಿಗೆ ಕಳುಹಿಸಿ. ರಾಷ್ಟ್ರಪತಿಯೂ ಆದಿವಾಸಿ ಹಿನ್ನೆಲೆಯವರೇ ಆಗಿದ್ದಾರೆ, ಆದ್ದರಿಂದ ಅವರು ಈ ಮಸೂದೆಯನ್ನು ನಿಲ್ಲಿಸುವುದಿಲ್ಲ”. ಎಂದು ಕೆಸಿಆರ್ ಹೇಳಿದ್ದಾರೆ.