ಹೊಸದಿಗಂತ ವರದಿ ಹುಬ್ಬಳ್ಳಿ :
ಬಿಜೆಪಿ ಶೇ. 40 ರಷ್ಟು ಕಮಿಷನ್ ಸರ್ಕಾರ ಎಂಬುದರ ಬಗ್ಗೆ ಅವರ ನಾಯಕರಲ್ಲಿ ಆರೋಪ ಪ್ರತ್ಯಾರೋಪಗಳು ಕೇಳಿಬರುತ್ತಿದ್ದು, ಇದರಿಂದ ಬಿಜೆಪಿ ಸಂಸ್ಕೃತಿ ಏನೆಂಬುದು ರಾಜ್ಯಕ್ಕೆ ಗೊತ್ತಾಗಿದೆ ಎಂದು ಮಾಜಿ ಮುಖ್ಯ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಶಾಸಕ ತಿಪ್ಪಾರಡ್ಡಿ ಆಡಿಯೋ ಕುರಿತು ಮಂಗಳವಾರ ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರು ಹಾಗೂ ಶಾಸಕರಲ್ಲಿಯೇ ಕೆಸರು ಎರಚಾಟ ಆರಂಭವಾಗಿದ್ದು, ನಾವು ಈ ಬಗ್ಗೆ ಮಾತನಾಡುವ ಪ್ರಯೋಜನವಿಲ್ಲ. ರಾಜ್ಯದ ಜನರೇ ಬಿಜೆಪಿ ಅನ್ನು ಹೊರಗೆ ಕಳುಹಿಸುತ್ತಾರೆ ಎಂದು ಹರಿಹಾಯ್ದರು.
ಸ್ಯಾಂಟ್ರೋ ರವಿ ಪ್ರಕರಣ ಸಿಐಡಿ ತನಿಖೆ ನೀಡಿದ ಹಿನ್ನೆಲೆ ಪ್ರತಿಕ್ರಿಯಿಸಿ, ಯಾವ ರೀತಿ ತನಿಖೆ ನಡೆಸುತ್ತಾರೋ, ಏನೆಲ್ಲ ತನಿಖೆ ಮಾಡುತ್ತಾರೋ ಹಾಗೂ ತನಿಖೆಯಿಂದ ಯಾವೆಲ್ಲಾ ಸತ್ಯಾಂಶ ಹೊರಬರುತ್ತೆ ಕಾದು ನೋಡೋಣ ಎಂದರು.
ಇಂದಿನಿಂದ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಿಂದ ಪಂಚರತ್ನ ಯಾತ್ರೆ ಆರಂಭವಾಗುತ್ತದೆ. ಫೆ. 2 ರಿಂದ 15 ದಿನಗಳ ಕಾಲ ವಿಜಯಪುರ, ರಾಯಚೂರು, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಯಾತ್ರೆ ನಡೆಯಲಿದೆ. ನಂತರ ನಾಲ್ಕನೇ ಹಂತದ ಪಂಚರತ್ನ ಯಾತ್ರೆ ಕಿತ್ತೂರ ಕರ್ನಾಟಕದಲ್ಲಿ ನಡೆಯುತ್ತದೆ ಎಂದು ತಿಳಿಸಿದರು.