– ಸಂತೋಷ ಡಿ. ಭಜಂತ್ರಿ
ಅಪ್ಪಟ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ ವಿರುದ್ಧ ಕಾಂಗ್ರೆಸ್ ನಾಯಕರು ಗುರುತರ ಆರೋಪ ಮಾಡುತ್ತಿರುವ ಬೆನ್ನಲ್ಲೆ ಹಿಂದೂ ಪರ ಸಂಘಟನೆಗಳು ಹಾಗೂ ಬಿಜೆಪಿ ಸವಾಲಾಗಿ ಸ್ವೀಕರಿಸಿದ್ದು, ಗಣೇಶೋತ್ಸವ ಮಂಡಳಿಗಳ ಸಹಾಯದಿಂದ ರಾಜ್ಯಾದ್ಯಂತ ಹತ್ತು ಸಾವಿರಕ್ಕೂ ಹೆಚ್ಚು ಕಡೆ ಸಾವರ್ಕರ ಗಣೇಶೋತ್ಸವ ಅಭಿಯಾನ ಕೈಗೊಳ್ಳಲು ನಿರ್ಧರಿಸಿವೆ.
ಆ.31 ರಂದು ಗಣೇಶೋತ್ಸವ ಹಿನ್ನೆಲೆ ಸಾರ್ವಜನಿಕ ಗಣೇಶೋತ್ಸವದ ಪ್ರತಿ ಪೆಂಡಾಲ್ಗಳಲ್ಲಿ ಗಣೇಶನ ಮೂರ್ತಿಯೊಂದಿಗೆ ಸಾವರ್ಕರ್ ಫೊಟೊ ಇಟ್ಟು ಪೂಜಿಸಿ ಸ್ವಾತಂತ್ರ್ಯ ಹೋರಾಟದ ಬಗ್ಗೆ ಪ್ರತಿ ಮನೆ ಮನೆಗೆ ತಿಳಿಸಲು ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ವಿಭಿನ್ನ ಅಭಿಯಾನ ಕೈಗೊಂಡಿದ್ದು, ಅವರಿಗೆ ಗೌರವ ಸಲ್ಲಿಸಲು ಮುಂದಾಗಿವೆ.
ಸಾವರ್ಕರ್ ಅವರ ದೇಶಪ್ರೇಮ ವಿವಾದಾತೀತ. ಬಾಲ್ಯದಿಂದಲೂ ರಾಷ್ಟ್ರಕ್ಕೆ ಅರ್ಪಿಸಿಕೊಂಡ ಬದುಕು ಅವರದ್ದು. ಚಿಕ್ಕಂದಿನಲ್ಲೇ ಮಿತ್ರಮೇಳವನ್ನು ಸ್ಥಾಪಿಸಿ ಗೆಳೆಯರಿಗೆ ರಾಷ್ಟ್ರೀಯತೆಯ ಪಾಠ ಕಲಿಸುತ್ತಿದ್ದವರು ಅವರು. ಆನಂತರ ಅಭಿನವ ಭಾರತವನ್ನು ಸ್ಥಾಪಿಸಿ ದೊಡ್ಡ ಕ್ರಾಂತಿ ಹುಟ್ಟುಹಾಕಿದ್ದು ಈಗ ಇತಿಹಾಸ.
ಅಭಿಯಾನಕ್ಕೆ ಭಾರಿ ಬೆಂಬಲ
ಸಾವರ್ಕರ್ ವಿಷಯದಲ್ಲಿ ಶಿವಮೊಗ್ಗದಲ್ಲಿ ನಡೆದ ಘಟನೆ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ಸಾವರ್ಕರ್ ಬಗ್ಗೆ ಅಭಿಮಾನ ಇದ್ದರೆ ಪುಸ್ತಕ ಪ್ರಕಟಿಸಿ, ಕಾರ್ಯಕ್ರಮ ಆಯೋಜಿಸಿ, ಅವರ ಮೇಲೆ ಇರುವ ಆರೋಪಗಳಿಗೆ ಉತ್ತರಿಸಿ ಎಂದು ಬಹಿರಂಗ ಸವಾಲು ಹಾಕಿದ್ದರು. ಇದರಿಂದ ರೊಚ್ಚಿಗೆದ್ದ ಹಿಂದೂ ಪರ ಸಂಘಟನೆಗಳು ತಕ್ಕ ಉತ್ತರ ನೀಡಲು ರಾಜ್ಯಾದ್ಯಂತ ಸಾವರ್ಕರ್ ಗಣೇಶೋತ್ಸವ ಅಭಿಯಾನ ಹಮ್ಮಿಕೊಂಡಿದ್ದು, ಈ ಅಭಿಯಾನಕ್ಕೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ.
ಒಟ್ಟಾರೆಯಾಗಿ ಕಾಂಗ್ರೆಸ್ ರಾಜ್ಯದಲ್ಲಿ ಕೋಮುಗಲಭೆ ಹುಟ್ಟುಹಾಕಲು ಸಾವರ್ಕರ್ ಅವರ ಫೋಟೋವನ್ನೇ ಅಸ್ತವಾಗಿ ಬಳಸಿಕೊಳ್ಳುತ್ತಿದ್ದು, ಇದನ್ನು ಹಿಂದೂ ಪರ ಸಂಘಟನೆಗಳು ಗಂಭೀರವಾಗಿ ಪರಿಗಣಿಸಿವೆ. ಸಾವರ್ಕರ್ರ ನಿಜ ಜೀವನದ ಮೇಲೆ ಬೆಳಕು ಚೆಲ್ಲಲು ಸಾವರ್ಕರ್ ಗಣೇಶೋತ್ಸವ ಅಭಿಯಾನ ಬಗ್ಗೆ ಚಿಂತನ ಮಂಥನ ನಡೆಸಿದ್ದುಸಾಗತಾರ್ಹ. ಇದರಿಂದ ಸಾವರ್ಕರ್ ಬಗ್ಗೆ ಇರುವ ಭ್ರಮೆಗಳು ದೂರವಾಗುವ ಕಾಲ ಸನ್ನಿಹಿತವಾಗಿದೆ.
ಪ್ರತಿ ಮನೆ ಮನೆಗೂ ಸಾವರ್ಕರ್!
ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಮಾಹಿತಿ ಪ್ರತಿ ಮನೆ ಮನೆಗೂ ತಲುಪಿಸುವ ನಿಟ್ಟಿನಲ್ಲಿ ಹಿಂದೂ ಪರ ಸಂಘಟನೆಗಳಿಂದ ಗಣೇಶ ಮೂರ್ತಿಯೊಂದುಗೆ ಅವರ ಭಾವಚಿತ್ರವಿಟ್ಟು ಪೂಜೆ, ವಿಚಾರ ಸಂಕಿರಣ, ನಾಟಕ, ಚಿತ್ರಕಲಾ ಪ್ರದರ್ಶನ, ಭಾಷಣ ಸ್ಪರ್ಧೆ, ಸಿನಿಮಾ ಪ್ರದರ್ಶನ, ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
“ಸಾವರ್ಕರ್ ಗಣೇಶೋತ್ಸವ ಎನ್ನುವ ಹೆಸರಿನಲ್ಲಿ ಗಣೇಶನ ಪೆಂಡಾಲ್ ಹಾಕುವ ಯೋಜನೆ ರೂಪಿಸಲಾಗಿದೆ. ರಾಜ್ಯದ 10 ಸಾವಿರಕ್ಕೂ ಅಧಿಕ ಗಣೇಶೋತ್ಸವ ಪೆಂಡಾಲ್ಗಳಲ್ಲಿ ಗಣೇಶನ ಮೂರ್ತಿಯೊಂದಿಗೆ ಸಾವರ್ಕರ್ ಚಿತ್ರ ಇಟ್ಟು ಪೂಜಿಸಲಿದ್ದೇವೆ.”
-ಚಕ್ರವರ್ತಿ ಸೂಲಿಬೆಲೆ, ಯುವ ಬ್ರಿಗೇಡ್ ಸಂಸ್ಥಾಪಕ“ಗಣೇಶೋತ್ಸವದೊಂದಿಗೆ ಸಾವರ್ಕರ್ ಉತ್ಸವವನ್ನು ಹಿಂದೂ ಸಂಘಟನೆಗಳಿಂದ ಮಾಡಲಿದ್ದೇವೆ. ಪ್ರತಿ ಪೆಂಡಲ್ನಲ್ಲೂ ಅವರ ಫೋಟೋ ಇಟ್ಟು ಸ್ವಾತಂತ್ರ್ಯ ಹೋರಾಟದ ಬಗ್ಗೆ ರಾಜ್ಯಾದ್ಯಂತ ತಿಳಿಸುವ ಕೆಲಸ ಮಾಡುತ್ತೇವೆ”.
-ಪ್ರಮೋದ್ ಮುತಾಲಿಕ್, ಶ್ರೀರಾಮಸೇನೆ ಸಂಸ್ಥಾಪಕ, ಅಧ್ಯಕ್ಷ