ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನೂಲು ಜಿಲ್ಲೆಯ ಹೊಳಗುಂಡ ಮಂಡಲದ ದೇವರಗಟ್ಟುವಿನಲ್ಲಿ ನಡೆದ ಕೋಲು ಕಾಳಗದಲ್ಲಿ 70ಮಂದಿ ಭಕ್ತರು ಗಾಯಗೊಂಡಿದ್ದಾರೆ. ದಸರಾ ಪ್ರಯುಕ್ತ ಶ್ರೀಮಲೆ ಮಲ್ಲೇಶ್ವರ ಸ್ವಾಮಿಯ ಮಹೋತ್ಸವದ ಅಂಗವಾಗಿ ನಡೆದ ಕೋಲು ಕಾಳಗದಲ್ಲಿ ಈ ಘಟನೆ ನಡೆದಿದೆ.
ಕರ್ನೂಲು ಜಿಲ್ಲೆಯ ದೇವರಗಟ್ಟು ಮಲೆ ಮಲ್ಲೇಶ್ವರ ಸ್ವಾಮಿ ದಸರಾ ಬನ್ನಿ ಜೈತ್ರಯಾತ್ರೆ ವಿಶೇಷವಾದದ್ದು. ಮಲೆ ಮಲ್ಲೇಶ್ವರಸ್ವಾಮಿ ದೇವಾಲಯವು ಸುಮಾರು 800 ಅಡಿ ಎತ್ತರದ ಬೆಟ್ಟದ ಮೇಲೆ ನೆಲೆಗೊಂಡಿದೆ. ದಸರಾ ಬನ್ನಿ ಉತ್ಸವದ ಸಂದರ್ಭದಲ್ಲಿ ಸುತ್ತಲಿನ ಗ್ರಾಮಗಳ ಭಕ್ತರು ಸ್ವಾಮಿಯ ಮೂರ್ತಿಗಳನ್ನು ಪಡೆಯಲು ಎರಡು ಗುಂಪುಗಳಾಗಿ ಬೇರ್ಪಟ್ಟು ಪರಸ್ಪರ ಕೋಲಿನಿಂದ ಹೊಡೆದಾಡಿಕೊಳ್ಳುತ್ತಾರೆ. ಈ ಕ್ರಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಭಕ್ತಾದಿಗಳು ಗ್ರಾಮಗಳಾಗಿ ವಿಭಜಿಸಿ ಕೋಲಿನಿಂದ ಮುಖಾಮುಖಿಯಾದರು. ಈ ಘಟನೆಯಲ್ಲಿ 70 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾರೀ ಮಳೆಯಿಂದಾಗಿ ಆ ರಸ್ತೆಯಲ್ಲಿ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿತ್ತು.
ಇನ್ನು ಈ ಹಬ್ಬದ ವಿವರಕ್ಕೆ ಹೋದರೆ ಬುಧವಾರ ರಾತ್ರಿ ಸ್ವಾಮಿಯ ಕಲ್ಯಾಣೋತ್ಸವ ಮುಗಿದ ಬಳಿಕ ಮಧ್ಯರಾತ್ರಿಯ ನಂತರ ಜೈತ್ರಯಾತ್ರೆ ಆರಂಭವಾಗಿ, ಗುರುವಾರ ಬೆಳಗ್ಗೆ ನೇರಣಿ ಗ್ರಾಮದ ದೇವಸ್ಥಾನದ ಅರ್ಚಕರು ಭವಿಷ್ಯ ನುಡಿಯುತ್ತಾರೆ. ಬಳಿಕ ರಥೋತ್ಸವ ನಡೆಯಲಿದ್ದು, 8ರಂದು ಗೊರವಯ್ಯನ ಆಟಗಳು, ಸರ ಒಡೆಯುವುದು, ದೇವದಾಸಿಯರ ಹಬ್ಬ, ಸಂಜೆ ವಸಂತೋತ್ಸವ, ಬಳೆ ತೊಡುವುದು ನಡೆಯಲಿದೆ. 9ರಂದು ಮಲೆ ಮಲ್ಲೇಶ್ವರ ಸ್ವಾಮಿಯ ಮೂರ್ತಿಗಳು ನೆರಣಿ ಗ್ರಾಮಕ್ಕೆ ಆಗಮಿಸುವ ಮೂಲಕ ಉತ್ಸವ ಮುಕ್ತಾಯವಾಗುತ್ತದೆ.