ಹೊಸ ದಿಗಂತ ಡಿಜಿಟಲ್ ಡೆಸ್ಕ್
ಕರ್ನಾಟಕದ ಕೋಲಾರದ ಮುಳಬಾಗಿಲಿನಿಂದ ಹಿಡಿದು, ಪಶ್ಚಿಮ ಬಂಗಾಳ, ಗುಜರಾತ್, ಮಧ್ಯಪ್ರದೇಶ, ಜಾರ್ಖಂಡ ಹೀಗೆ ದೇಶದ ನಾನಾ ಭಾಗಗಳಿಂದ ರಾಮನವಮಿ ಶೋಭಾಯಾತ್ರೆಗಳ ಮೇಲೆ ಕಲ್ಲುತೂರಾಟವಾದ, ದೊಂಬಿ ಎಬ್ಬಿಸಿದ ವರದಿಗಳು ಬಂದಿವೆ. ಯಾವಾಗ ಶೋಭಾಯಾತ್ರೆ ಮುಸ್ಲಿಂ ಬಾಹುಳ್ಯದ ಪ್ರದೇಶಗಳಿಗೆ ಕಾಲಿಟ್ಟಿತೋ ಆಗಲೇ ಕಲ್ಲುತೂರಾಟ, ವಾಹನಗಳಿಗೆ ಬೆಂಕಿ ಇತ್ಯಾದಿ ಕೃತ್ಯಗಳು ಶುರುವಾಗಿದ್ದು.
ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತ ವಿಡಿಯೋಗಳು ವೈರಲ್ ಆಗುತ್ತ, ಹಿಂದು ಸಮಾಜದ ಆಕ್ರೋಶವನ್ನು ಕೆಣಕುತ್ತಿದ್ದಂತೆ ಅತ್ತ ಬುದ್ಧಿಜೀವಿಗಳು, ಲಿಬರಲ್ ಗಳು ಅಂದುಕೊಂಡವರಿಂದ ತೂರಿಬಂದ ಪ್ರಶ್ನೆ- “ಅರೇ, ಇವರೇಕೆ ಮಸೀದಿ ಎದುರಿನ ರಸ್ತೆಗಳಲ್ಲಿ ಹೋಗಬೇಕಿತ್ತು? ಅಲ್ಲೇಕೆ ರಾಮನ ಘೋಷಣೆಗಳನ್ನು ಕೂಗಬೇಕಿತ್ತು? ‘ಮುಸ್ಲಿಂ ಏರಿಯಾ’ಗಳಿಗೆ ಇವರು ಹೋಗಿದ್ದೇ ತಪ್ಪು…” ಇತ್ಯಾದಿ ವಾದಗಳು ಕೇಳಿಬಂದಿವೆ.
ಇದಕ್ಕೆ ಪ್ರತಿಯಾಗಿ ಸಾಮಾಜಿಕ ಮಾಧ್ಯಮದಲ್ಲಿ ಮತ್ತೆ ಆಕ್ರೋಶ ವ್ಯಕ್ತವಾಗಿದ್ದು, ಮಸೀದಿ ಎದುರು ಯಾತ್ರೆ ಹೋಗುವ, ತಮ್ಮ ದೇವರ ಪರ ಘೋಷಣೆ ಮೊಳಗಿಸುವ ಸ್ವಾತಂತ್ರ್ಯ ಹಿಂದುಗಳಿಗೆ ಇಲ್ಲವೇನು ಎಂದು ಪ್ರಶ್ನಿಸಲಾಗಿದೆ.
ಮಧ್ಯಪ್ರದೇಶದ ಶಿವರಾಜ ಸಿಂಗ್ ಚೌಹಾಣ್ ಸರ್ಕಾರವು ಶಂಕಿತ ಗಲಭೆನಿರತರ ಮನೆಗಳಿಗೆ ಬುಲ್ಡೋಜರ್ ಹಾಕಿರುವುದು ಸಹ ಚರ್ಚೆಯ ವಿಷಯವಾಗಿದೆ. ಉಳಿದಂತೆ, ಎಲ್ಲ ಕಡೆ ಈ ಬಗೆಯ ದೊಂಬಿಗಳಲ್ಲಿ ಭಾಗಿಯಾಗಿದ್ದ ಶಂಕಿತರನ್ನು ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಗಿದೆ.